ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ರಾಜ್ಯ ಸರಕಾರಿ ನಿವೃತ್ತ ನೌಕರರ ಮತ್ತು ಹಿರಿಯ ನಾಗರಿಕರ ಸೇವಾ ಸಂಘ ಬೆಳ್ತಂಗಡಿ ಇದರ ‘ರಜತ ಸಂಭ್ರಮ’ದ ಹಾಗೂ ರೂ.೪೦ ಲಕ್ಷ ವೆಚ್ಚದಲ್ಲಿ ಅಚ್ಚಿನಡ್ಕ ಕೆಲ್ಲಗುತ್ತು ಎಂಬಲ್ಲಿ ನಿರ್ಮಿಸಲಾದ ಸಂಘದ ನೂತನ ಕಟ್ಟಡ ‘ಪ್ರಬುದ್ಧ’ ಇದರ ಉದ್ಘಾಟನೆ ಎ.೨೫ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ವಿಠಲ ಶೆಟ್ಟಿ ತಿಳಿಸಿದರು.
ಅವರು ಎ.15ರಂದು ಬೆಳ್ತಂಗಡಿ ಪತ್ರಕರ್ತರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನೂತನ ಕಟ್ಟಡವನ್ನು ಶಾಸಕ ಹರೀಶ್ ಪೂಂಜ ಅವರು ಉದ್ಘಾಟಿಸಲಿದ್ದು, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಜ್ಯೋತಿ ಬೆಳಗಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ ನಾಮಫಲಕ ಅನಾವರಣ, ಎಂಎಲ್ಸಿಸಿ ಪ್ರತಾಪಸಿಂಹ ನಾಯಕ್ ಪ್ರಬುದ್ಧ -೩ ಸ್ಮರಣ ಸಂಚಿಕೆ ಬಿಡುಗಡೆ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಪ್ರಬುದ್ಧ ಮಹಾದಾನಿಗಳ ಭಾವಚಿತ್ರ ಅನಾವರಣ, ಎಕ್ಸಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ದಾನಿಗಳ ಫಲಕ ಅನಾವರಣ, ಧಾರ್ಮಿಕ ಮುಖಂಡ ಕಿರಣ್ಚಂದ್ರ ಪುಷ್ಪಗಿರಿ ಕಚೇರಿ ಕೊಠಡಿ ಉದ್ಘಾಟನೆ ಮಾಡಲಿದ್ದಾರೆ. ವಿವಿಧ ಸಂಘ-ಸಂಸ್ಥೆಗಳ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಂಘದ ಸ್ಥಾಪನೆ: 2000ನೇ ಇಸವಿಯಲ್ಲಿ ಅಂದಿನ ನಿವೃತ್ತ ಜಂಟಿ ನಿರ್ದೇಶಕರಾಗಿದ್ದ ಪಿ. ವೆಂಕಟರಮಣರ ನೇತೃತ್ವದಲ್ಲಿ ಕೆಲವೇ ಮಂದಿಯ ಸದಸ್ಯತ್ವದೊಂದಿಗೆ ಸಂಘ ಆರಂಭಗೊಂಡಿದ್ದು, ಪಿ. ಕೊಕ್ಕೇಶ್ವರರು ಪ್ರಥಮ ಕಾರ್ಯದರ್ಶಿಯಾಗಿದ್ದರು. ಎರಡು ವರ್ಷಗಳ ಬಳಿಕ ಬಿ. ವಿಠಲ ಶೆಟ್ಟಿ ಸಂಘದ ಅಧ್ಯಕ್ಷರಾದ ಬಳಿಕ ಸಂಘವು ಸದಸ್ಯತನ ನೊಂದಣಿ ಸಹಿತ ಹತ್ತು ಹಲವು ಜನೋಪಯೋಗಿ ಕಾರ್ಯಕ್ರಮಗಳು ಮತ್ತು ವಿವಿಧ ಚಟುವಟಿಕೆಗಳೊಂದಿಗೆ ನಾಗಾಲೋಟದಿಂದ ಮುನ್ನಡೆದಿದೆ.
ಮಾಜಿ ಶಾಸಕ, ಮುಖ್ಯ ಸಚೇತಕರಾಗಿದ್ದ ದಿ. ವಸಂತ ಬಂಗೇರರ ಕಾಲದಲ್ಲಿ ಸಂಘಕ್ಕೆ ಸ್ವಂತ ಸೂರು ಹೊಂದುವರೆ ಪ್ರಯತ್ನಿಸಿ ಜಿಲ್ಲಾಧಿಕಾರಿಗಳು ಮತ್ತು ಬಂಗೇರ ಶಿಫಾರಸಿನೊಂದಿಗೆ ಸರಕಾರದ ತನ್ನ ಪ್ರಯತ್ನಪಟ್ಟು ಕಾಶಿಬೆಟ್ಟುವಿನಲ್ಲಿ ಸ್ಥಳ ಗುರುತಿಸಿದರೂ ಕಾನೂನು ತೊಡಕಿನಿಂದ ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ವೀರಮ್ಮರಿಂದ ಜಾಗ ದಾನ: ಸಂಘದ ಸದಸ್ಯೆ ಅಚ್ಚಿನಡ್ಕ ಶ್ರೀಮತಿ ವೀರಮ್ಮನವರು ತನ್ನ ತಾಯಿಯ ಹೆಸರಿನಲ್ಲಿ ಕಟ್ಟಡ ರಚನೆ ಮಾಡುವ ಶರತ್ತಿನೊಂದಿಗೆ ಸಂಘಕ್ಕೆ 10 ಸೆಂಟ್ಸ್ ಸ್ಥಳವನ್ನು ದಾನವಾಗಿ ನೀಡಿದ್ದು, ಬೆಳ್ತಂಗಡಿ ತಾಲೂಕು ಸರಕಾರಿ ನಿವೃತ್ತ ನೌಕರರು ಮತ್ತು ಹಿರಿಯ ನಾಗರಿಕರ ಸೇವಾ ಸಂಸ್ಥೆಯನ್ನು ಹುಟ್ಟು ಹಾಕಿ ಕಾರ್ಯಾರಂಭ ಮಾಡಿ, ಪ್ರಬುದ್ಧ ಹಿರಿಯರ ಸ್ವಾಭಿಮಾನ ಮತ್ತು ದೃಢಸಂಕಲ್ಪದಿಂದ ಸುಮಾರು ರೂ. 40 ಲಕ್ಷ ರೂಪಾಯಿ ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಸುಮಾರು ೧೫೦೦ ಚ. ವಿ. ವಿಸ್ತೀರ್ಣವುಳ್ಳ ಸಭಾಂಗಣದ ತಳ ಅಂತಸ್ತು ವಾಹನ ನಿಲುಗಡೆಯಾದರೆ ಪೂರ್ಣಗೊಂಡ ಮೊದಲ ಅಂತಸ್ತು ಸಭಾಂಗಣವಾಗಿದೆ. ಕಟ್ಟಡದಲ್ಲಿ “ಲಿಫ್ಟ್” ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಹಿರಿಯರಿಗೆ ಮಾರ್ಗದಿಂದ ನೇರ ಸಭಾಂಗಣಕ್ಕೆ ಪ್ರವೇಶ ಪಡೆಯಲು ಕಾಲು ಸಂಕದ ವ್ಯವಸ್ಥೆ ಮಾಡಲಾಗಿದೆ. ಸಭಾಂಗಣದಲ್ಲಿ ಶೌಚಾಲಯ, ಕೈತೊಳೆಯುವ ವ್ಯವವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಈ ಸೇವಾ ಸಂಸ್ಥೆಯ ಕಟ್ಟಡಕ್ಕಾಗಿ ರೂ. ಒಂದು ಲಕ್ಷ ಮೇಲ್ಪಟ್ಟು ದೇಣಿಗೆ ನೀಡಿದವರ ಭಾವಚಿತ್ರಗಳನ್ನು ಸಭಾಂಗಣದಲ್ಲಿ ಅಳವಡಿಸಲಾಗುವುದು. ಸಂಘಕ್ಕೆ ೨೫ ವರ್ಷಗಳು ಪೂರ್ಣಗೊಂಡ ಬೆಳ್ಳಿಹಬ್ಬದ ಸವಿನೆನಪಿಗಾಗಿ ಹೊರತರಲಾಗುವ ಸ್ಮರಣ ಸಂಚಿಕೆ “ಪ್ರಬುದ್ಧ- 3” ರಲ್ಲಿ ದಾನಿಗಳ ಭಾವಚಿತ್ರ ಅಚ್ಚು ಹಾಕಲಾಗುವುದು. ಸಂಘದ ಕಟ್ಟಡ ನಾಮಫಲಕದಲ್ಲಿ ಹಾಕಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಾಗದ ದಾನಿ ಶ್ರೀಮತಿ ವೀರಮ್ಮ ಅಚ್ಚಿನಡ್ಕ, ಕಾರ್ಯದರ್ಶಿ ವಿಶ್ವಾಸ್ ರವ್, ಉಪಾಧ್ಯಕ್ಷರಾದ ಸನ್ಮತ್ ಕುಮಾರ್, ಶ್ರೀಮತಿ ಕುಸಿಮಾವತಿ, ಕೋಶಾಧಿಕಾರಿ ಜಗನ್ನಿವಾಸ ರಾವ್, ಸ್ವಾಗತ ಸಮಿತಿ ಸದಸ್ಯ ಆರ್.ಎನ್.ಪೂವಣಿ ಉಪಸ್ಥಿತರಿದ್ದರು.












