ಬೆಳ್ತಂಗಡಿ: ಕನ್ಯಾಡಿ | ಗ್ರಾಮದ ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದ ಎದುರಿನ ಬೀಗವನ್ನು ಮುರಿದು ಕಳ್ಳರು ದೇವರ ನಾಲ್ಕು ಕಾಣಿಕೆ ಡಬ್ಬಿಗಳನ್ನು ಕಳವುಗೈದ ಘಟನೆ ಎ.೨೨ರಂದು ವರದಿಯಾಗಿದೆ.
ಎ.21ರಂದು ರಾತ್ರಿ ಸುಮಾರು ೨ ಗಂಟೆಯ ವೇಳೆಗೆ ದೇವಸ್ಥಾನದ ಎದುರಿನ ಬಾಗಿಲ ಬೀಗವನ್ನು ಯಾವುದೇ ಆಯುಧರಿಂದ ಮೀಟಿ ಮುರಿದು ಒಳನುಗ್ಗಿದ ಕಳ್ಳರು ದೇವಸ್ಥಾನದ ಒಳಗೆ ಇದ್ದ ಒಂದು ದೊಡ್ಡ ಕಾಣಿಕೆ ಡಬ್ಬಿ ಹಾಗೂ ಮೂರು ಸಣ್ಣ ಕಾಣಿಕೆ ಡಬ್ಬಿಯನ್ನು ಕಳವುಗೈದು ಪರಾರಿಯಾಗಿದ್ದಾರೆ. ಕಳ್ಳರು ದೇವಸ್ಥಾನ ಬೀಗ ಮುರಿದು ಒಳನುಗ್ಗಿ ಕಾಣಿಕೆ ಡಬ್ಬಿ ಕಳವು ಗೈದಿರುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಕಳವಾದ ನಾಲ್ಕು ಕಾಣಿಕೆ ಡಬ್ಬಿಯಲ್ಲಿ ಭಕ್ತರು ಕಾಣಿಕೆ ಹಾಕಿದ ರೂ.೩೦ ಸಾವಿರದಷ್ಟು ಹಣ ಇತ್ತೆಂದು ಅಂದಾಜಿಸಲಾಗಿದೆ. ನಿಡಿಗಲ್ ಶ್ರೀ ಲೋಕನಥೇಶ್ವರ ದೇವಸ್ಥಾನದ ಸಿರಿ ಜಾತ್ರೋತ್ಸವ ಇತ್ತಿಚೇಗೆ ಆದ್ದೂರಿಯಾಗಿ ಜರುಗಿತ್ತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ ಹಾಗೂ ಸಮಿತಿ ಸದಸ್ಯರು, ಊರವರು ದೇವಸ್ಥಾನಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.













