ಬೆಳ್ತಂಗಡಿ: ಗುರುವಾಯನಕೆರೆಯಿಂದ ಉಪ್ಪಿನಂಗಡಿ ವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸಲು ರೂ.13 ಕೋಟಿ ಅಂದಾಜುಪಟ್ಟಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಎ.30ರಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ.
ಗುರುವಾಯನಕೆರೆಯಿಂದ ಉಪ್ಪಿನಂಗಡಿ ವರೆಗಿನ ರಾಜ್ಯ ಹೆದ್ದಾರಿಯು ಗುಡ್ಡ ಇಳಿಜಾರು ಮತ್ತು ತಿರುವ ಹೊಂದಿ ರುವ ರಸ್ತೆಯಾಗಿದೆ. ಬೆಂಗಳೂರು ಹಾಗೂ ಜಿಲ್ಲಾ ಕೇಂದ್ರಕ್ಕೆ ಹಾಗೂ ಧರ್ಮಸ್ಥಳ, ವೇಣೂರು, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಾಗಿದೆ.
ಸಂಸದರಾದ ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ ರವರ ಪ್ರಯತ್ನದಲ್ಲಿ ಈಗಾಗಲೇ ರಸ್ತೆಯ 9.50 ಕಿ.ಮೀ. ಉದ್ದ ಚತುಷ್ಪಥ ರಸ್ತೆಯಾಗಿದೆ. ಉಳಿದ ಭಾಗದಲ್ಲಿ ಲಭ್ಯವಿರುವ ಅನುದಾನಕ್ಕೆ ಅನುಗುಣವಾಗಿ 1.270 ಕಿ.ಮೀ. ಚತುಷ್ಪಥ ರಸ್ತೆ, ಆಯ್ದ ಭಾಗಗಳಲ್ಲಿ ತಡೆಗೋಡೆ, ಆರ್ಸಿಸಿ ಚರಂಡಿ ನಿರ್ಮಾಣ, ಭೂಸ್ವಾಧೀನ ವೆಚ್ಚಕ್ಕೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ರಾಜ್ಯ ಸಚಿವ ಸಂಪುಟವು 13 ಕೋಟಿ ವೆಚ್ಚದಲ್ಲಿ ಈ ಹೆದ್ದಾರಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದೆ.
ಶಾಸಕ ಹರೀಶ್ ಪೂಂಜರ ಹೋರಾಟಕ್ಕೆ ಫಲ : ಗುರುವಾಯನಕೆರೆಯಿಂದ ಉಪ್ಪಿನಂಗಡಿ ವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸಲು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಸರಕಾರದ ಗಮನ ಸೆಳೆದಿದ್ದರು. ಸಾರ್ವಜನಿಕರೊಂದಿಗೆ ಸೇರಿ, ಪ್ರತಿಭಟನೆಯನ್ನು ನಡೆಸಿದ್ದರು. ವಿಧಾನಸಭೆಯಲ್ಲಿ ಕೂಡ ರಸ್ತೆ ವಿಚಾರ ಪ್ರಸ್ತಾಪಿಸಿ, ಸರಕಾರದ ಗಮನ ಸೆಳೆದಿದ್ದರು. ಇದೀಗ, ರಸ್ತೆ ಅಭಿವೃದ್ಧಿಗೆ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಅಲ್ಲದೇ, ಮುಂದಿನ ದಿನಗಳಲ್ಲಿ ಲೋಕೋಪಯೋಗಿ ಇಲಾಖೆಯ SHDP ಯೋಜನೆಯಡಿ ವಾರ್ಷಿಕವಾಗಿ ಶಾಸಕರುಗಳಿಗೆ ಲಭ್ಯವಾಗುವ ರೂ.12.00ಕೋಟಿ ಅನುದಾನದಲ್ಲಿ ಸಂಪೂರ್ಣ ರೂ.12.00ಕೋಟಿ ಮೊತ್ತವನ್ನು ಕೂಡ ಆದ್ಯತೆಯ ಮೇರೆಗೆ ಇದೇ ರಸ್ತೆಗೆ ಕುಪ್ಪೆಟ್ಟಿ- ಉಪ್ಪಿನಂಗಡಿ ರಸ್ತೆಯನ್ನು ಪುನರ್ ನಿರ್ಮಾಣ ಮಾಡಲು ಈಗಾಗಲೇ ಮಾನ್ಯ ಶಾಸಕರು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ಕಾಮಗಾರಿಗೆ ಆಡಳಿತಾತ್ಮಕ ಹಾಗೂ ಆರ್ಥಿಕ ಮಂಜೂರಾತಿ ದೊರೆತ ತಕ್ಷಣವೇ ಟೆಂಡರ್ ಪ್ರಕ್ರಿಯೆಗಳನ್ನು ಮುಗಿಸಿ ಸುಸಜ್ಜಿತ ರಸ್ತೆಯು ನಿರ್ಮಾಣಗೊಳ್ಳಲಿದೆ ಎಂದು ಶಾಸಕರಾದ ಹರೀಶ್ ಪೂಂಜಾ ಈ ಹಿಂದೆ ಭರವಸೆ ನೀಡಿದ್ದರು. ಇದೀಗ ರಸ್ತೆ ಅಭಿವೃದ್ಧಿಗೆ ಸರಕಾರ ಅನುಮೋದನೆ ನೀಡಿದ್ದು ವಾಹನ ಸವಾರರಿಗೆ ನಿಟ್ಟುಸಿರು ಬಿಡುವಂತಾಗಿದೆ.














