ಉಜಿರೆ: ಸದಾ ವಿಶೇಷವಾದ ಮತ್ತು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ NABH ಪುರಸ್ಕೃತ ಬೆನಕ ಹೆಲ್ತ್ ಸೆಂಟರ್ ನಲ್ಲಿ ತಾಯಂದಿರ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲಾಯಿತು.
ಆಸ್ಪತ್ರೆಯ ಸಿಬ್ಬಂದಿಗಳಲ್ಲಿ ತಾಯಿ ಸ್ಥಾನದಲ್ಲಿರುವ ಉದ್ಯೋಗಿಗಳನ್ನು ಗುರುತಿಸಿ, ಅವರ ಮಕ್ಕಳೊಂದಿಗೆ ಬರುವಂತೆ ತಿಳಿಸಿ, ಮಕ್ಕಳೊಂದಿಗೆ ತಾಯಂದಿರಿಗೆ ನುಡಿ ನಮನ ಸಮರ್ಪಿಸಲಾಯಿತು. 7ನೇ ತರಗತಿಗೆ ಪಾದಾರ್ಪಣೆ ಮಾಡಿದ ಮತ್ತು 7 ನೇ ತರಗತಿ ಮುಗಿಸಿದ 10 ನೇ ತರಗತಿಗೆ ಪಾದಾರ್ಪಣೆ ಮಾಡಿದ ಮತ್ತು 10 ನೇ ತರಗತಿ ಮುಗಿಸಿದ ಹಾಗೂ ಪದವಿಪೂರ್ವ ತರಗತಿಯಲ್ಲಿ ಓದುತ್ತಿರುವ ಆಸ್ಪತ್ರೆಯ ಸಿಬ್ಬಂದಿಗಳ ಮಕ್ಕಳನ್ನು ಆಹ್ವಾನಿಸಿ ಅವರಿಗಾಗಿ ಅಭಿನಂದನೋತ್ಸವ ಕಾರ್ಯಕ್ರಮ ಆಯೋಜಿಸಲಾಯಿತು.
ಆಸ್ಪತ್ರೆಯ ವತಿಯಿಂದ ಎಲ್ಲ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಅಲ್ಲದೆ, ಈ ವರ್ಷದ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುನ್ನತ ಶ್ರೇಣಿ ಪಡೆದಂತ 3 ವಿದ್ಯಾರ್ಥಿಗಳಿಗೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಗೋಪಾಲಕೃಷ್ಣ ಮತ್ತು ಡಾ.ಭಾರತಿ ದಂಪತಿಗಳು ಹಾರ ಹಾಕಿ ಶಾಲು ಹೊದಿಸಿ , ಸ್ಮರಣಿಕೆ ನೀಡಿ ವಿಶೇಷವಾಗಿ ಅಭಿನಂದಿಸಿದರು.
ಉಜಿರೆಯ ಪ್ರಸಿದ್ಧ ದಂತ ವೈದ್ಯರಾದ ಡಾ.ದೀಪಾಲಿ ಡೊಂಗ್ರೆಯವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯ ಕುರಿತು ಕೈಗೊಳ್ಳಬೇಕಾದ ಸಿದ್ಧತೆಯ ಕುರಿತು ಉಪಯುಕ್ತ ಮತ್ತು ಪ್ರಸ್ತುತವಾದ ಮಾಹಿತಿ ನೀಡಿದರು .
ಅಧ್ಯಕ್ಷ ಸ್ಥಾನದಿಂದ ವೈದ್ಯಕೀಯ ನಿರ್ದೇಶಕರಾದ ಡಾ.ಗೋಪಾಲಕೃಷ್ಣ ರವರು ಮಾತನಾಡುತ್ತ ಕಣ್ಣಿಗೆ ಕಾಣುವ ದೇವರೆಂದರೆ ಅದು ತಾಯಿ ಮಾತ್ರ ಎಂದು ತಮ್ಮ ತಾಯಿಯ ತ್ಯಾಗವನ್ನು ಭಾವುಕರಾಗಿ ನೆನೆಸಿಕೊಂಡರು ಮತ್ತು ಸದಾ ರೋಗಿಗಳ ಶುಶ್ರುಷೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವಾಗ ಈ ದಿನ ಮಕ್ಕಳೊಡನೆ ನಾನೂ ಒಂದು ಮಗುವಾಗಿ ಬೆರೆಯುವ ಮತ್ತು ಕೆಲಸದ ಒತ್ತಡ ಮತ್ತು ಜಂಜಾಟಗಳಿಂದ ದೂರವಾಗಿ ಅನುಭೂತಿಯ ಆನಂದವನ್ನು ಅನುಭವಿಸುತ್ತಿದ್ದೇನೆ ಮತ್ತು ಹೊಸ ಉತ್ಸಾಹವನ್ನು ಪಡೆದಿದ್ದೇನೆಂದು ಹೇಳುತ್ತಾ ಸೇರಿದ ತಾಯಂದಿರಿಗೆ ಮತ್ತು ಮಕ್ಕಳಿಗೆ ಅಭಿನಂದಿಸಿದರು.
ಡಾ. ಭಾರತಿ ಜಿ.ಕೆ ಯವರು ಕಾರ್ಯಕ್ರಮದ ಸ್ಥೂಲ ವಿವರಣೆ ನೀಡುತ್ತಾ ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಡಾ.ಅಂಕಿತ ಜಿ ಭಟ್ ಮತ್ತು ಡಾ.ನವ್ಯ ಭಟ್ ಉಪಸ್ಥಿತರಿದ್ದರು.













