ಬೆಳ್ತಂಗಡಿ: ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸಂಯಮದಿಂದ ಮತ್ತು ಮಿತವಾಗಿ ಬಳಸುವುದು ಇಂದಿನ ಅಗತ್ಯವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಮೋದಿ ‘ಅಮದು ಮಾಡಿಕೊಳ್ಳುವ ಪೆಟ್ರೋ ಉತ್ಪನ್ನಗಳನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಬೇಕು. ಇದರಿಂದ ವಿದೇಶಿ ವಿನಿಮಯ ಉಳಿಯುವುದಲ್ಲದೆ ಯುದ್ಧದ ಪರಿಣಾಮ ಕಡಿಮೆ ಮಾಡುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಸೌರಶಕ್ತಿಯ ಬಳಕೆ ಹೆಚ್ಚಿದ್ದು, ಪೆಟ್ರೋಲ್ನೊಂದಿಗೆ ಎಥೆನಾಲ್ ಮಿಶ್ರಣ ಮಾಡಿ ಬಳಸುವಲ್ಲಿಯೂ ಗಮನಾರ್ಹ ಪ್ರಗತಿ ಸಾಧಿಸಿ ದ್ದೇವೆ. ಈ ಮೊದಲು ನಮ್ಮ ಸರ್ಕಾರ ಶೇ. 100 ರಷ್ಟು ಎಲ್ಪಿಜಿ ಬಳಕೆಗೆ ಗಮನ ಹರಿಸಿತ್ತು. ಆದರೆ ಈಗ ಕಡಿಮೆ ವೆಚ್ಚದಲ್ಲಿ ಪೈಪ್ ಗ್ಯಾಸ್ ಪೂರೈಕೆಯತ್ತ ಗಮನ ಹರಿಸಿದ್ದೇವೆ. ಸರ್ಕಾರ ಸಿಎನ್ಜಿ ಬಳಕೆಯನ್ನೂ ಉತ್ತೇಜಿಸುತ್ತಿದೆ. ಈ ಎಲ್ಲ ಪ್ರಯತ್ನಗಳ ಫಲವಾಗಿ ವಿಶ್ವದಾದ್ಯಂತ ಸಾಕಷ್ಟು ಸಮಸ್ಯೆ ಸೃಷ್ಟಿಸಿರುವ ಇಂಧನ ಬಿಕ್ಕಟ್ಟಿನ ಸಮರ್ಥವಾಗಿ ಎದುರಿಸುತ್ತಿದ್ದೇವೆ’ ಎಂದರು.
ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಕಂಪನಿಗಳಿಗೆ ಹೆಚ್ಚಿನ ನಷ್ಟ ವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಿ ಬೆಲೆಯ ಹೊರೆ ತಗ್ಗಿಸಲು ಪ್ರಯತ್ನಿಸಿದೆ. ಪೆಟ್ರೋಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಲೀ. 13 ರೂ.ನಿಂದ 3 ರೂ.ಗೆ ಇಳಿಸಲಾಗಿದೆ. ಡೀಸೆಲ್ ಮೇಲಿನ ಸುಂಕವನ್ನು ಲೀ. 10 ರೂ.ನಿಂದ ಶೂನ್ಯಕ್ಕೆ ಇಳಿಸಲಾಗಿದೆ. ಅಬಕಾರಿ ಸುಂಕ ಕಡಿತದಿಂದಾಗಿ ಸರ್ಕಾರಕ್ಕೆ ತಿಂಗಳಿಗೆ 14,000 ಕೋಟಿ ರೂ. ನಷ್ಟವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಟೆಕ್ಸ್ಟೈಲ್ ಪಾರ್ಕ್ ಉದ್ಘಾಟನೆ: ತೆಲಂಗಾಣದ ವಾರಂಗಲ್ನಲ್ಲಿ ದೇಶದ ಮೊದಲ ಪಿಎಂ ಮಿತ್ರಾ ಟೆಕ್ಸ್ ಟೈಲ್ ಪಾರ್ಕ್ಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು. 1,695.54 ಕೋಟಿ ರೂ. ವೆಚ್ಚದಲ್ಲಿ ಈ ಪಾರ್ಕ್ ನಿರ್ಮಿಸಲಾಗಿದೆ. ಭಾರತದ ಜವಳಿ ಉದ್ಯಮದ ಬೆಳವಣಿಗೆಗೆ ಈ ಇದು ದೊಡ್ಡ ಶಕ್ತಿ ಆಗಲಿದೆ.













