
ಬೆಳ್ತಂಗಡಿ: ತಾಲೂಕಿನ ಕಡಿರುದ್ಯಾವರ ಮಿತ್ತಬಾಗಿಲು, ಮಲವಂತಿಗೆ, ದಿಡುಪೆ, ಅಳದಂಗಡಿ ಮೊದಲಾದ ಭಾಗಗಳಲ್ಲಿ ಮಂಗಳವಾರ ಮಧ್ಯಾಹ್ನದ ಬಳಿಕ ಗುಡುಗು, ಸಿಡಿಲು, ಗಾಳಿ ಸಹಿತ ಭಾರಿ ಮಳೆ ಸುರಿದಿದೆ.
ಬೆಳ್ತಂಗಡಿ ನಗರ, ವೇಣೂರು, ಉಜಿರೆ, ಲಾಯಿಲ, ಕನ್ಯಾಡಿ, ಶಿರ್ಲಾಲು, ಗುರಿಪಳ್ಳ, ಮುಂಡಾಜೆ, ಕಲ್ಮಂಜ ಮುಂತಾದ ಕಡೆ ಸಾಮಾನ್ಯ ಮಳೆಯಾಗಿದೆ.
ಕೊಲ್ಲಿ-ಕಿಲ್ಲೂರು- ಬಂಗಾಡಿ-ಲಾಯಿಲ ರಸ್ತೆಯಲ್ಲಿ ಮರವೊಂದು ರಸ್ತೆಗೆ ಉರುಳಿ ಬಿದ್ದು ವಾಹನ ಸಂಚಾರಕ್ಕೆ ತಡೆ ಉಂಟಾಯಿತು. ಸ್ಥಳೀಯರು ಸೇರಿ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು. ಮರವು ವಿದ್ಯುತ್ ಲೈನ್ ಮೇಲೆಯೂ ಬಿದ್ದ ಕಾರಣ ತಂತಿಗಳು ತುಂಡಾಗಿ ರಸ್ತೆಯುದ್ದಕ್ಕೂ ಹರಡಿಕೊಂಡಿದ್ದವು.
ಕಳೆದ ಕೆಲವು ದಿನಗಳಿಂದ ತಾಲೂಕಿನ ಹೆಚ್ಚಿನ ಭಾಗಗಳಲ್ಲಿ ಮಳೆ ಸುರಿಯದೆ ಭಾರಿ ಸೆಕೆಯ ವಾತವರಣ ನಿರ್ಮಾಣವಾಗಿತ್ತು. ಮಳೆ ಆರಂಭವಾಗುತ್ತಿದ್ದಂತೆ ಗ್ರಾಮೀಣ ಭಾಗಗಳಲ್ಲಿ ಯಥಾಪ್ರಕಾರ ವಿದ್ಯುತ್ ಹಾಗೂ ಅಂತರ್ಜಾಲ ವ್ಯವಸ್ಥೆಯಲ್ಲಿ ವ್ಯತ್ಯಯ ಕಂಡುಬಂದಿದೆ.













