ನೈನಾಡು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನೈನಾಡು ಗೆಳೆಯರ ಬಳಗ ಸೇವಾ ಸಂಸ್ಥೆ ಟ್ರಸ್ಟ್ (ರಿಜಿಸ್ಟರ್) ವತಿಯಿಂದ ರೂ.150000 ಮೌಲ್ಯದ ಸುಮಾರು 90 ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಿತು. ಜೊತೆಗೆ ಇಬ್ಬರು ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಾಯಧನ, ಅಲ್ಲದೆ ತೀರ ಬಡತನದಲ್ಲಿರುವ ಇಬ್ಬರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯಧನ ನೀಡಲಾಯಿತು.

ಗೆಳೆಯರ ಬಳಗದ ನಿರ್ದೇಶಕರಾದ ವಿನ್ಸೆಂಟ್ ಗಲ್ಬಾವೊ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಜೇಶ್ ಕೆ ವಿ ಅವರು ಅಧ್ಯಕ್ಷತೆ ವಹಿಸಿ ಮಕ್ಕಳು ಮೊಬೈಲ್ ಎಂಬ ಭ್ರಮಲೋಕದಿಂದ ಹೊರ ಬರಬೇಕಾಗಿ ಕೇಳಿಕೊಂಡರು, ಅಲ್ಲದೆ ಮೊಬೈಲ್ ನ ಬಳಕೆಯನ್ನು ಕಡಿಮೆ ಮಾಡಬೇಕು ಎಂದರು. ಗೆಳೆಯರ ಬಳಗದ ಗೌರವಾಧ್ಯಕ್ಷರಾದ ನೆಲ್ವಿಸ್ಟರ್ ಪಿಂಟೊ ರವರು ಮಾತನಾಡಿ ಸಮಾಜದಲ್ಲಿ ಮಕ್ಕಳು ಮುಂದೆ ಬಂದು ಸರ್ಕಾರಿ ಸೇವೆಗೆ ಸೇರಲು ಪ್ರಯತ್ನಿಸಬೇಕು ಎಂದರು.

ಸರಕಾರಿ ಪ್ರೌಢಶಾಲೆ ನಯನಾಡು ಇಲ್ಲಿಯ ಕನ್ನಡ ಅಧ್ಯಾಪಕ ಜಯಪ್ರಕಾಶ್ ಕೆ ಎಸ್ ಅವರು ವಿಶೇಷ ಅತಿಥಿಯಾಗಿ ಮಾತನಾಡಿ ಸಂಘಟನೆ ಎಂದರೆ ಕೇವಲ ಪ್ರಚಾರಕ್ಕಾಗಿ ಅಲ್ಲ ,ಅದು ಇರುವುದು ಸಮಾಜದ ಒಳಿತಿಗಾಗಿ ಎಂಬುವುದನ್ನು ಗೆಳೆಯರ ಬಳಗ ಸೇವಾ ಸಂಸ್ಥೆ ಮಾಡಿ ತೋರಿಸಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀಮತಿ ಜಾಯ್ಸ್ ಪಿಂಟೊ, ಶ್ರೀಮತಿ ಪುಷ್ಪಲತಾ ಸಾಲಿಯನ್ ಮಾಜಿ ಪಂಚಾಯತ್ ಸದಸ್ಯರು, ಶ್ರೀಮತಿ ಮೇಬುಲ್ ಫೆರ್ನಾಂಡಿಸ್, ಪತ್ರಕರ್ತರಾದ ರತ್ಮದೇವ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸರಕಾರಿ ಪ್ರೌಢ ಶಾಲೆ ನಯನಾಡು ಇದರ ಮುಖ್ಯೋಪಾಧ್ಯಾಯರಾದ ಜೊಯೆಲ್ ಲೋಬೊ ಸ್ವಾಗತಿಸಿದರು. ನಾವು ದಾನದಿಂದ ಬಂದ ಹಣ ಎಲ್ಲೂ ದುರುಪಯೋಗಪಡಿಸದೇ ನೇರ ಫಲಾನುಭವಿಗೆ ನೀಡುತ್ತೇವೆ, ಮತ್ತು ಮುಂದಿನ ದಿನಗಳಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ತೀವ್ರ ಹೊತ್ತು ನೀಡುವುದಾಗಿ ಗೆಳೆಯರ ಬಳಗದ ಅಧ್ಯಕ್ಷ ಡೋನ್ ಪ್ರವೀಣ್ ಕ್ರಾಸ್ತಾರವರು ತಮ್ಮ ಪ್ರಸ್ತಾವಿಕ ಮಾತಿನಲ್ಲಿ ತಿಳಿಯಪಡಿಸಿದರು. ಪ್ರದೀಪ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.












