ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 625 ಪೂರ್ಣ ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿ ಜಿ ಮಾಧುರ್ಯ ಇವರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿನ ಪ್ರಾಂಶುಪಾಲರಾದ ಡಾ. ವಿಶ್ವನಾಥ್ ಪಿ, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಧನ್ಯ ಕುಮಾರ್ ಹಾಗೂ ಶೈಕ್ಷಣಿಕ ಮಾರ್ಗದರ್ಶಕ ಎಸ್ಎನ್ ಕಾಕತ್ಕರ್ ಆಗಮಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನಪೂರ್ಣ ಛತ್ರದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಶ್ರೀಮತಿ ಮಧುರ ಇವರ ಸುಪುತ್ರಿ ಕುಮಾರಿ ಮಾಧುರ್ಯ ಇವರ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಅವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿ ಹಾಗೂ ಶಿಕ್ಷಕ ವೃಂದದವರು ಸಂತಸ ವ್ಯಕ್ತಪಡಿಸಿದ್ದು ಮಾಧುರ್ಯ ಅವರನ್ನು ಪುಷ್ಪ ವೃಷ್ಟಿಯೊಂದಿಗೆ ಸ್ವಾಗತಿಸಲಾಯಿತು. ಬಳಿಕ ಫಲಪುಷ್ಪ ನೀಡಿ ಪ್ರಶಂಸಾ ಪತ್ರದೊಂದಿಗೆ ಅವರನ್ನು ಅಭಿನಂದಿಸಲಾಯಿತು. ಪ್ರಶಂಸಾ ಪತ್ರವನ್ನು ಪಡೆದ ಮಾಧುರ್ಯ ತನ್ನ ಸಾಧನೆಯ ಹಿಂದಿರುವ ಶಕ್ತಿ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಮಾತುಗಳನ್ನು ಆಡಿದರು.
ಬಳಿಕ ಮಾತನಾಡಿದ ಪ್ರಾಂಶುಪಾಲರಾದ ಡಾ. ವಿಶ್ವನಾಥ್ ಪಿ ಅವರು ಮಾಧುರ್ಯ ಹಾಗೂ ಅವರ ಹೆತ್ತವರನ್ನು ಹಾಗೂ ಶಿಕ್ಷಕರನ್ನು ಅಭಿನಂದಿಸಿದರು. ಅವಕಾಶಗಳನ್ನು ಬಳಸಿ ಸರಿಯಾಗಿ ಕೆಲಸ ಮಾಡಬೇಕು ಪ್ರಯತ್ನ ಪಟ್ಟರೆ ಫಲ ದೊರೆಯುತ್ತದೆ ಎಂಬ ಕಿವಿಮಾತುಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಶೈಕ್ಷಣಿಕ ಸಂಯೋಜಕ ಎಸ್ಎನ್ ಕಾಕತ್ಕರ್ ಶಿಕ್ಷಕರ ಶ್ರಮದ ಜೊತೆಗೆ ವಿದ್ಯಾರ್ಥಿಗಳ ಶ್ರಮ ಸೇರಿದಾಗ ಯಶಸ್ಸು ಕೈಗೂಡುತ್ತದೆ, ಶಿಸ್ತು ಹಾಗೂ ಸಂಸ್ಕಾರದ ಮಹತ್ವವನ್ನು ವಿವರಿಸಿದರು. ಬಳಿಕ ಮಾತನಾಡಿದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯ ಕುಮಾರ್ ಶಾಲೆಯ ಅನನ್ಯ ಸಾಧನೆಯ ಕುರಿತು ಪ್ರಶಂಸೆ ವ್ಯಕ್ತಪಡಿಸುತ್ತಾ ಮುಂದಿನ ಶೈಕ್ಷಣಿಕ ವರ್ಷಕ್ಕೆ ಶುಭ ಹಾರೈಸಿದರು. ಮಾಧುರ್ಯ ಅವರ ಹೆತ್ತವರು ಮಾತನಾಡುತ್ತಾ ಶಾಲೆಯ ಶಿಕ್ಷಕ ವೃಂದದ ಶ್ರಮ ಹಾಗೂ ಶಾಲಾ ಮುಖೋಪಾಧ್ಯಾಯಿನಿ ಪರಿಮಳ ಎಂ ವಿ ಅವರ ಬೆಂಬಲವನ್ನು ಸ್ಮರಿಸಿ ಅವರನ್ನು ಸನ್ಮಾನಿಸಿದರು. ಶಾಲಾ ಶಿಕ್ಷಕ ವೃಂದ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅತ್ಯಂತ ಸಂಭ್ರಮದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.












