ಬೆಳ್ತಂಗಡಿ : ಕಳ್ಳತನ ಶಂಕೆ ಆರೋಪ ಹೊರಿಸಿ ಯುವಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ ಬಳಿಕ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಸಿಕಂದರ್ ಪಾಷ ನೇತೃತ್ವದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಅಲಾದಿಕೊಟ್ಟಿಗೆ ಶ್ರೀದೇವಿ ಕಾಂಪ್ಲೆಕ್ಸ್ ಆವರಣದಲ್ಲಿ ಜೂನ್.1 ರಂದು ಬೆಳಗ್ಗೆ ಬಂಟ್ವಾಳ ತಾಲೂಕಿನ ಪರ್ನೆ ನಿವಾಸಿ ಯತೀಶ್ ಗೌಡ(33) ಎಂಬಾತನ ಮೇಲೆ ಕಳ್ಳತನ ಶಂಕೆ ಆರೋಪ ಹೊರಿಸಿ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ನಿವಾಸಿ ಯಶೋಧರ(35), ಕಡಬ ತಾಲೂಕಿನ ಚಾರ್ವಾಕ ನಿವಾಸಿ ಮೋಹನ್ (30) , ಬೆಳ್ತಂಗಡಿ ತಾಲೂಕಿನ ಪಡಂಗಡಿ ನಿವಾಸಿ ಇಬ್ರಾಹಿಂ(54) ಸೇರಿಕೊಂಡು ಹಗ್ಗದಿಂದ ಕಟ್ಟಿಹಾಕಿ ಬಳಿಕ ಹಲ್ಲೆ ನಡೆಸಿದ ಪರಿಣಾಮದಿಂದ ಸ್ಥಳದಲ್ಲಿಯೇ ಕೊಲೆಯಾಗಿದ್ದಾನೆ.

ಘಟನೆ ಬಗ್ಗೆ ಯತೀಶ್ ಗೌಡ ಸಹೋದರ ನಿತಿನ್ ಮೂವರು ಆರೋಪಿಗಳು ಹಲ್ಲೆ ನಡೆಸಿ ಕೊಲೆ ಮಾಡಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಸಿಕಂದರ್ ಪಾಷ ನೇತೃತ್ವದ ತಂಡ ಮೂವರು ಆರೋಪಿಗಳನ್ನು ಜೂನ್1 ರಂದು ರಾತ್ರಿ ಬಂಧಿಸಿದ್ದಾರೆ.
ಕೊಲೆ ಆರೋಪಿಗಳ ವಿಚಾರಣೆ ನಡೆಸಿ ಬಂಧಿಸಿ ಜೂ.2 ರಂದು ಘಟನಾ ಸ್ಥಳಕ್ಕೆ ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿ ಕೊಲೆ ಮಾಡಲು ಬಳಸಿದ ಒಂದು ಪಿವಿಸಿ ಪೈಪ್, ಒಂದು ಹಗ್ಗವನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಮೂವರು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆ ನಡೆಸಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಸಿಸಿಕ್ಯಾಮರ ನೀಡಿದ ಸುಳಿವು: ಅನುಮಾನಸ್ಪದವಾಗಿ ಮೃತದೇಹ ಪತ್ತೆಯಾಗಿರುವ ಬಗ್ಗೆ ಸ್ಥಳೀಯರು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ 112 ಪೊಲೀಸರು ಮತ್ತು ಬೆಳ್ತಂಗಡಿ ಪೊಲೀಸರಿಗೂ ಯಾವುದೇ ಅನುಮಾನ ಬಂದಿರಲ್ಲಿಲ್ಲ ಯಾಕೆಂದರೆ ಮೇಲ್ನೋಟಕ್ಕೆ ಯತೀಶ್ ದೇಹದಲ್ಲಿ ಯಾವುದೇ ರಕ್ತ ಬಂದ ಗಾಯಗಳು ಕಂಡು ಬಂದಿಲ್ಲ, ಆದ್ರೆ ಸಬ್ ಇನ್ಸ್ಪೆಕ್ಟರ್ ಸಿಕಂದರ್ ಪಾಷ ಮತ್ತು ತಂಡ ಸ್ಥಳೀಯ ಅಂಗಡಿಗಳ ಸಿಸಿಕ್ಯಾಮರ ಪರಿಶೀಲನೆ ನಡೆಸಿದಾಗ ಹಲ್ಲೆ ಮಾಡುವ ದೃಶ್ಯ ಒಂದು ಪತ್ತೆಯಾಗಿ ಕೊಲೆ ಪ್ರಕರಣ ಬೆಳಕಿಗೆ ಬಂದು ಮೂವರು ಆರೋಪಿಗಳು ಜೈಲುಪಾಲಾಗಿದ್ದಾರೆ.












