ಬೆಳ್ತಂಗಡಿ: ಕಣಿಯೂರು ಗ್ರಾಮ ಪಂಚಾಯತ್ ಸದಸ್ಯನಾಗಿದ್ದ ಪ್ರವೀಣ್ ಗೌಡ ಅವರ ಮೇಲೆ ರಾಡ್ ನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪ್ರಜ್ವಲ್ ಕೆ.ವಿ ಗೌಡ ಮತ್ತು ರಾಧಾಕೃಷ್ಣ ಗೌಡರಿಗೆ ಜೈಲು ಶಿಕ್ಷೆ ಮತ್ತು ರೂ 5,000 ದಂಡ ವಿಧಿಸಿ ನ್ಯಾಯಾಲಯವು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಕಳೆದ ಜುಲೈ 28- 2024 ರಂದು ಬೆಳ್ತಂಗಡಿ ತಾಲೂಕಿನ ಕಣಿಯೂರಿನಲ್ಲಿ ಅಂಗಡಿ ವ್ಯಾಪಾರ ನಡೆಸುತ್ತಿದ್ದ ಕಣಿಯೂರು ಗ್ರಾಮ ಪಂಚಾಯತ್ ಸದಸ್ಯನಾಗಿದ್ದ ಪ್ರವೀಣ್ ಗೌಡ ಅವರ ಮೇಲೆ ಕಿರಣ್ ಶಿಶಿಲ, ಪ್ರಜ್ವಲ್ ಕೆವಿ ಗೌಡ ಮತ್ತು ರಾಧಾಕೃಷ್ಣ ಗೌಡ ಬರಮೇಲು ರವರು ಪ್ರವೀಣ್ ರವರ ಅಂಗಡಿಗೆ ಪ್ರವೇಶಿಸಿ “ನೀನು ಮಹೇಶಣ್ಣ ನ ಬಗ್ಗೆ ಬಾರಿ ಮಾತನಾಡುತ್ತೀಯ” ನೀನು ಪಂಚಾಯತ್ ಮೆಂಬರ್ ಎಂದು ಹಾರಾಡಬೇಡ ಎಂದು ರಾಡ್ ನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆ ಹಾಕಿದ್ದರು. ಹಳ್ಳೆಗೊಳಗಾದ ಪ್ರವೀಣ್ ರವರು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಉಪ್ಪಿನಂಗಡಿ ಪೋಲೀಸರು ಪ್ರವೀಣ್ ರವರ ಹೇಳಿಕೆ ಯ ಪ್ರಕಾರ ಪ್ರಕರಣ ದಾಖಲಿಸಿ, ತನಿಖೆ ನಡೆಸಿ,ಬೆಳ್ತಂಗಡಿ ಹಿರಿಯ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು ಎ1 ಕಿರಣ್ ಶಿಶಿಲ ಪ್ರಕರಣದ ವಿಚಾರಣೆಗೆ ಸರಿಯಾಗಿ ಹಾಜರಾಗದ ಕಾರಣ ಆತನ ವಿರುದ್ಧ ಪ್ರತ್ಯೇಕ ವಿಭಜಿತ ಪ್ರಕರಣ ದಾಖಲಿಸಿ, ಉಳಿದ ಆರೋಪಿಗಳಾದ ಪ್ರಜ್ವಲ್ ಕೆವಿ ಗೌಡ ಮತ್ತು ರಾಧಾಕೃಷ್ಣ ಗೌಡ ಬರಮೇಲು ಅವರ ಮೇಲಿನ ಪ್ರಕರಣದ ವಿಚಾರಣೆಯನ್ನು ಕೈಗೊಂಡು ದಿನಾಂಕ 02.06.2026 ರಂದು ಅಂತಿಮ ಆದೇಶ ಮಾಡಿದೆ.ಆದೇಶದ ಪ್ರಕಾರ ಪ್ರಜ್ವಲ್ ಕೆ.ವಿ ಗೌಡ ಹಾಗೂ ರಾಧಾಕೃಷ್ಣ ಗೆ ತಲಾ 6 ತಿಂಗಳ ಜೈಲು ಶಿಕ್ಷೆ ಮತ್ತು ರೂ 5,000 ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.ಅಭಿಯೋಜನೆಯ ಪರವಾಗಿ ಎ ಪಿ ಪಿ ದಿವ್ಯರಾಜ್ ವಾದಿಸಿದ್ದರು.












