ನೆಲ್ಯಾಡಿ: ಭಾರತೀಯ ಭೂಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಪದೋನ್ನತಿ ಹೊಂದಿರುವ ಉದನೆ ಪ್ಯಾರಿಷ್ನ ಪುತ್ತೆನ್ಪರಂಬಿಲ್ ಜೋಸೆಫ್ ಮತ್ತು ಮೇರಿ ದಂಪತಿಯ ಪುತ್ರ ಲೆ. ಕರ್ನಲ್ ವಿನೋಜ್ ಪಿ.ಜೆ. ಅವರನ್ನು ನೆಲ್ಯಾಡಿ ಸೆಂಟ್ ಅಲ್ಫೋನ್ಸ ಪುಣ್ಯಕ್ಷೇತ್ರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
1995ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡ ವಿನೋಜ್ ಅವರು ಕ್ರೀಡಾ ಹಾಗೂ ಸೈನಿಕ ಸೇವೆಯಲ್ಲಿ ಗಮನಾರ್ಹ ಸಾಧನೆ ತೋರಿದ್ದು, 2011ರಲ್ಲಿ ಅಧಿಕಾರಿಯಾಗಿ ನೇಮಕಗೊಂಡರು. ನಂತರ ಕ್ಯಾಪ್ಟನ್, ಮೇಜರ್ ಹಾಗೂ 2024ರಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಪದೋನ್ನತಿ ಹೊಂದಿದರು. ಪ್ರಸ್ತುತ ಜಬಲ್ಪುರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಪುಣ್ಯಕ್ಷೇತ್ರದ ನಿರ್ದೇಶಕರಾದ ವಂದನೀಯ ಫಾ. ಷಾಜಿ ಮಾತ್ಯು, ಸೈನಿಕ ಸೇವೆಯು ದೇಶಸೇವೆಯ ಅತ್ಯಂತ ಮಹತ್ವಪೂರ್ಣ ಕ್ಷೇತ್ರವಾಗಿದ್ದು, ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸಶಸ್ತ್ರ ಪಡೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಮಾತೃವೇದಿಕೆ ಅಧ್ಯಕ್ಷೆ ಸುಜಾ ಜೇಮ್ಸ್, ಸಿಸ್ಟರ್ ಲಿಸ್ ಮಾತ್ಯು, ಯುವಜನ ಸಂಘದ ದಿಶಾ ಮತ್ತು ಜಿತು, ಕ್ರೆಡಿಟ್ ಯೂನಿಯನ್ನ ಶಿಬು ಹಾಗೂ ವಿನ್ಸೆಂಟ್ ಡಿ ಪೌಲ್ ಸಂಘದ ಸನ್ನಿ ಉಪಸ್ಥಿತರಿದ್ದರು. ಬೆರಿಲ್ ಕಾರ್ಯಕ್ರಮ ನಿರೂಪಿಸಿದರು.












