ಬೆಳ್ತಂಗಡಿ: ದ.ಕ. ಜಿಲ್ಲೆಯ ಮಲೆನಾಡ ಪ್ರದೇಶದ ತಪ್ಪಲಿನಲ್ಲಿರುವ ಕುದುರೆಮುಖ ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯ ಸುಳ್ಯ-ಕಡಬ ಬೆಳ್ತಂಗಡಿ ತಾಲೂಕಿನ ರೈತರು ಆನೆ, ಚಿರತೆ, ಕಾಡುಹಂದಿ ಹಾವಳಿಯಿಂದ ತಮ್ಮ ಕೃಷಿಭೂಮಿಯನ್ನು ರಕ್ಷಿಸಲು ಆತ್ಮ ರಕ್ಷಣೆಗಾಗಿ ಈ ಹಿಂದೆ ನೀಡುತ್ತಿದ್ದ ರೈತರಿಗೆ ಕೋವಿ ಪರವಾನಿಗೆ ಇತ್ತೀಚಿನ ವರ್ಷದಲ್ಲಿ ಸ್ಥಗಿತಗೊಂಡಿದ್ದು, ಇದನ್ನು ಪುನಾರಂಭಿಸಬೇಕು ಎಂದು ದ.ಕ. ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಸರಕಾರಕ್ಕೆ ಆಗ್ರಹ ಮಾಡಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಸರಕಾರ 2013ರ ಅವಧಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಅವಧಿಯಲ್ಲಿ ಜಿಲ್ಲೆಯ ಅನೇಕ ರೈತರಿಗೆ ಕೋವಿ ಪರವಾನಿಗೆ ನೀಡಲಾಗಿತ್ತು. ಆದರೆ ನಂತರ ಬಂದ ಜಿಲ್ಲಾಧಿಕಾರಿಗಳು ನೂತನ ಪರವಾನಿಗೆ ಅರ್ಜಿಯನ್ನು ಮಾನ್ಯ ಮಾಡದೆ ಕಡತದಲ್ಲೆ ಇಟ್ಟುಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಂದು ಕಡೆ ಆನೆಗಳು ರೈತರ ಮನೆ ಅಂಗಳಕ್ಕೆ ಬರುತ್ತಿವೆ, ಇತ್ತೀಚೆಗೆ ಚಿರತೆಗಳು ಅಲ್ಲಲ್ಲಿ ಕಾಣಿಸಿಕೊಂಡಿವೆ ಇವೆಲ್ಲದರ ಮಧ್ಯೆ ಕಾಡುಹಂದಿ ಇತ್ಯಾದಿಗಳ ಹಾವಳಿ ಮಧ್ಯೆ ರೈತರ ಕೃಷಿ ಜೀವನ ಸಾಗುತ್ತಿದೆ. ಪ್ರಾಣಿಗಳನ್ನು ಕೊಲ್ಲಲು ರೈತರು ಅವಕಾಶ ಕೊಡುತ್ತಿಲ್ಲ, ಬದಲಾಗಿ ಗ್ರಾಮೀಣ ಪ್ರದೇಶದ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ನಡೆದಾಡುವ ರಸ್ತೆಗಳಲ್ಲಿ ಮನೆಗಳ ಮಧ್ಯೆ ಪ್ರಾಣಿಗಳು ಸಂಚಾರ ಮಾಡುವ ಸಂದರ್ಭ ಕನಿಷ್ಠ ಪ್ರಾಣದ ರಕ್ಷಣೆಗಾಗಿ ಅವುಗಳನ್ನು ಬೆದರಿಸಲು ಆದರೂ ಅವಕಾಶ ನೀಡುವಂತೆ ಸರಕಾರ ಪುನರ್ ಚಿಂತಿಸಿ ರೈತರ ಹಿತದೃಷ್ಟಿಯಿಂದ ಕೋವಿ ಪರವಾನಿಗೆ ಪುನರಾರಂಭಿಸಬೇಕು ಎಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.
ಈ ಸಂಬಂಧಪಟ್ಟಂತೆ ನೂತನ ಅರಣ್ಯ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಒತ್ತಾಯ ಮಾಡಲಾಗುವುದು ಎಂದು ಮೋಹನ್ ಗೌಡ ತಿಳಿಸಿದ್ದಾರೆ.












