ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪರಿಸರ ಪ್ರೇಮಿ, ಕಾರ್ಗಿಲ್ ವನದ ರೂವಾರಿ ಹಾಗೂ ಶೌರ್ಯ ವಿಪತ್ತು ತಂಡದ ಸದಸ್ಯರಾದ ಸಚಿನ್ ಭಿಡೆ ಮಾತನಾಡಿ ‘ ಪರಿಸರ ನಮ್ಮ ಜೀವನಾಡಿ. ಆದುದರಿಂದ ಪರಿಸರ ದಿನ ಗಿಡಗಳನ್ನು ನೆಡುವುದು ಮಾತ್ರವಲ್ಲದೆ ಅವುಗಳ ಪೋಷಣೆಯ ಜವಾಬ್ದಾರಿ ಕೂಡ ನಮ್ಮದಾಗಬೇಕು” ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ಬಿ ಮಾತನಾಡಿ “ನಾವೆಲ್ಲರೂ ಪರಿಸರ ಪ್ರೇಮಿ ಆಗಿರಬೇಕು. ಗಿಡಗಳನ್ನು ನೆಡುವುದು ಒಂದು ದಿನಕ್ಕೆ ಸೀಮಿತ ಆಗಿರದೆ ನಮ್ಮ ನಿರಂತರ ಕಾರ್ಯಕ್ರಮ ಆಗಬೇಕು “ಎಂದು ಹೇಳಿದರು.
ಪರಿಸರ ದಿನದ ಅಂಗವಾಗಿ ಕಾಲೇಜಿನ ಉಪನ್ಯಾಸಕರಿಗೆ ಹಾಗೂ ಸ್ವಯಂ ಸೇವಕರಿಗೆ ಗಿಡ ವಿತರಿಸಲಾಯಿತು. ಕಾಲೇಜು ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಕನ್ನಡ ಉಪನ್ಯಾಸಕರಾದ ಸುಭಾಸ್ ರಾವ್ ಬೋಳೂರು, ಎನ್ ಎಸ್ ಎಸ್ ಯೋಜನಾಧಿಕಾರಿ ವಿಶ್ವನಾಥ್ ಎಸ್, ಸಹ ಯೋಜನಾಧಿಕಾರಿ ಶೋಭಾ ಪಿ ಉಪಸ್ಥಿತರಿದ್ದರು. ಸ್ವಯಂ ಸೇವಕಿ ನವನೀತು ನಿರೂಪಿಸಿ ರಕ್ಷಿತ ಸ್ವಾಗತಿಸಿ ಪ್ರೀತಮ್ ವಂದಿಸಿದರು.












