
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ (SDMCNYS) ರಾಷ್ಟ್ರೀಯ ಸೇವಾ ಯೋಜನೆ (NSS)ಯ ವತಿಯಿಂದ ರಾಷ್ಟ್ರೀಯ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಬೃಹತ್ ರ್ಯಾಲಿ ನಡೆಯಿತು.
ಜಾಥಾದ ಸಭಾ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಸಿಎನ್ ವೈಎಸ್ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪ್ರಶಾಂತ್ ಶೆಟ್ಟಿ ಉದ್ಘಾಟಿಸಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಯೋಗ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಸುಬ್ರಹ್ಮಣ್ಯ ಪೈಲೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಆರೋಗ್ಯಕರ ಭೂಮಿಯ ನಿರ್ಮಾಣಕ್ಕಾಗಿ ಸಕಾರಾತ್ಮಕ ಕ್ರಮಗಳನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಿದ್ದ ರ್ಯಾಲಿಯು ಮಹಾವಿದ್ಯಾಲಯದ ಆವರಣದಿಂದ ಪ್ರಾರಂಭವಾಗಿ ಉಜಿರೆಯ ಮಹಾದ್ವಾರ, ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿತು. ಜಾಥಾದಲ್ಲಿ ಭಾಗವಹಿಸಿದ್ದ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ವಿವಿಧ ಸಂದೇಶಗಳ ಫಲಕಗಳನ್ನು ಹಿಡಿದು, ಪ್ರಕೃತಿಯನ್ನು ಕಾಪಾಡುವ ಘೋಷಣೆಗಳನ್ನು ಕೂಗಿದರು.
ಜಾಥಾ ವೇಳೆ ವಿದ್ಯಾರ್ಥಿಗಳು, ಪರಿಸರ ಸಂರಕ್ಷಣೆ ಕೇವಲ ಸರ್ಕಾರಗಳು ಮತ್ತು ಸಂಘ ಸಂಸ್ಥೆಗಳ ಜವಾಬ್ದಾರಿಯಲ್ಲ, ಈ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಇದಕ್ಕೆ ಕಾರಣೀಭೂತರು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ನೀರು ಮತ್ತು ವಿದ್ಯುತ್ ಉಳಿತಾಯ ಮಾಡುವುದು, ಮರ ಗಿಡಗಳನ್ನು ನೆಡುವುದು, ತ್ಯಾಜ್ಯ ವಸ್ತುಗಳನ್ನು ಮರುಬಳಕೆ ಮಾಡುವುದು ಹಾಗೂ ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುವುದು ಮುಂತಾದ ಸಣ್ಣ ಸಣ್ಣ ಕಾರ್ಯಗಳು ಒಟ್ಟಾಗಿ ದೊಡ್ಡ ಬದಲಾವಣೆಯನ್ನು ಪರಿಸರದಲ್ಲಿ ತರಬವುದು ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಜಾಥಾದ ಸಮಾರೋಪ ಕಾರ್ಯಕ್ರಮದಲ್ಲಿ ಸೇರಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು
ಎಲ್ಲರು ಒಟ್ಟು ಸೇರಿ ಗಿಡ ಮರಗಳನ್ನು ನೆಡುವ ಮೂಲಕ ‘ಭೂಮಿಯು ನಮಗೆ ಸೇರಿರುವುದಿಲ್ಲ; ನಾವು ಭೂಮಿಗೆ ಸೇರಿದ್ದೇವೆ.’ ಎಂಬ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಡಾ.ಸುಜಾತಾ, ನ್ಯುಟ್ರಿಶನ್ ವಿಭಾಗದ ಮುಖ್ಯಸ್ಥೆ ಡಾ. ಗೀತಾ . ಬಿ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಿಕರಾದ ಡಾ.ಶಾಲ್ಮಲಿ ಸುನಿಲ್, ಡಾ.ದೀಪಿಕಾ, ಡಾ.ಬಾಲಕೃಷ್ಣ ಶೆಟ್ಟಿ, ಪರಿತೋಷ್, ಡಾ. ಯೋಹಿ , ಧರ್ಮೇಂದ್ರ, ಡಾ. ಹರ್ಷಿಣಿ, ಡಾ. ಸಮೃದ್ಧಿ, ಉದಯ ಸುಬ್ರಮಣ್ಯ, ಡಾ.ಸುಹಾಸ್ ಪೈ ಮತ್ತು ಡಾ. ಪ್ರಕೃತಿ, ಸೇರಿದಂತೆ ಮಹಾವಿದ್ಯಾಲಯದ ಅಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿದರು. ಮಹಾವಿದ್ಯಾಲಯ ಪ್ರಬಂಧಕರಾದ ಪ್ರಧಾನ್ ಕುಮಾರ್ ಸಹಕರಿಸಿದರು.












