23.7 C
ಪುತ್ತೂರು, ಬೆಳ್ತಂಗಡಿ
June 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನ್ಯೂ ರೋಹಿಣಿ ಜ್ಯೂಸ್ ಸೆಂಟರ್ ಮಾಲಕ ಧನಂಜಯ ಹೃದಯಾಘಾತದಿಂದ ನಿಧನ: ಕೊಕ್ಕಡ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಇದ್ದರೂ ದೊರೆಯದ ಸೌಲಭ್ಯ: ಸಾರ್ವಜನಿಕರ ಆಕ್ರೋಶ

ಕೊಕ್ಕಡ: ಕೊಕ್ಕಡ ಕೊಪ್ಪಳಕೋಡಿ ನಿವಾಸಿ ಹಾಗೂ ಸೌತಡ್ಕ ದ್ವಾರದ ಸಮೀಪದ ನ್ಯೂ ರೋಹಿಣಿ ಜ್ಯೂಸ್ ಸೆಂಟರ್ ಮಾಲಕ ಧನಂಜಯ್ (36) ಅವರು ಹೃದಯಾಘಾತದಿಂದ ಇಂದು (ಜೂ.6) ಬೆಳಗ್ಗೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆಯೇ ನಿಧನ ಹೊಂದಿದ ಘಟನೆ ಸಂಭವಿಸಿದೆ.

ಮಾಹಿತಿಯಂತೆ, ಶುಕ್ರವಾರ ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆಗೆ ಮನೆಯಲ್ಲಿ ಮಲಗಿದ್ದ ಧನಂಜಯ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರು.

ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ 108 ಆಂಬುಲೆನ್ಸ್ ಲಭ್ಯವಿದ್ದರೂ ಸಕಾಲದಲ್ಲಿ ಸೇವೆ ದೊರೆಯಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಕುಟುಂಬಸ್ಥರು ಹಾಗೂ ಸ್ಥಳೀಯರು ಖಾಸಗಿ ಕಾರಿನ ಮೂಲಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಈ ವೇಳೆ ದಾರಿ ಮಧ್ಯೆಯೇ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ಹಿನ್ನೆಲೆಯಲ್ಲಿ ಸ್ಥಳೀಯ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕೆಲವೇ ವರ್ಷಗಳ ಹಿಂದೆ ಕೊಕ್ಕಡದಲ್ಲಿ ಸುಸಜ್ಜಿತ ಆರೋಗ್ಯ ಕೇಂದ್ರ ನಿರ್ಮಿಸಲಾಗಿದ್ದರೂ, ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಸೇವೆ ದೊರೆಯದಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ತುರ್ತು ವೈದ್ಯಕೀಯ ಸೇವೆಗಳಲ್ಲಿನ ಲೋಪದಿಂದ ಈ ರೀತಿಯ ಘಟನೆಗಳು ಆಗಾಗ್ಗೆ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯದಿದ್ದಲ್ಲಿ ಕೊಕ್ಕಡ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಸಾರ್ವಜನಿಕ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮೃತ ಧನಂಜಯ್ ಅವರು ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದು, ಸ್ಥಳೀಯವಾಗಿ ಪರಿಚಿತ ಉದ್ಯಮಿಯಾಗಿದ್ದರು. ಅವರ ನಿಧನಕ್ಕೆ ವ್ಯಾಪಕ ಸಂತಾಪ ವ್ಯಕ್ತವಾಗಿದೆ.

ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಸಹೋದರನನ್ನು ಅಗಲಿದ್ದಾರೆ.

ನಮ್ಮ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಕೊರತೆ ಇದೆ. 108 ಆಂಬುಲೆನ್ಸ್‌ಗೆ ಕೇವಲ ಒಬ್ಬ ಚಾಲಕರಿದ್ದು, ಅವರು ಹಗಲಿನ ವೇಳೆ ನಿಯಮಿತ ಕರ್ತವ್ಯ ನಿರ್ವಹಿಸುತ್ತಾರೆ. ರಾತ್ರಿಯ ಸಮಯದಲ್ಲಿ ತುರ್ತು ಕರೆ ಬಂದಾಗಲೂ ಸೇವೆ ಒದಗಿಸುತ್ತಿದ್ದರು. ಘಟನೆ ನಡೆದ ದಿನ ಆ ಚಾಲಕರು ರಜೆಯಲ್ಲಿದ್ದ ಕಾರಣ ಆಂಬುಲೆನ್ಸ್ ಸೇವೆ ಲಭ್ಯವಾಗಿರಲಿಲ್ಲ.”
— ಡಾ.ತುಷಾರ, ಆಡಳಿತ ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಕ್ಕಡ.

Related posts

ಬಳಂಜ ಶ್ರೀ ಪಂಚಲಿಂಗೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ: ರುದ್ರಯಾಗ

Suddi Udaya

ಮತದಾನ ಜಾಗೃತಿಗಾಗಿ ಸೆಲ್ಪಿ ಪಾಯಿಂಟ್’ನಾನು ಮತದಾನ ಮಾಡುವೆ ನೀವು ಮಾಡಿ’ ಸಂದೇಶ ಸಾರಿದ ತಾ.ಪಂ.‌ಕಾಯ೯ನಿವಾ೯ಹಣಾಧಿಕಾರಿ ಹಾಗೂ ಸಿಬ್ಬಂದಿಗಳು

Suddi Udaya

ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ ಹೆಚ್.ಎಸ್ ವರ್ಗಾವಣೆ

Suddi Udaya

ಗುರುವಾಯನಕೆರೆ ಶ್ರೀ ವೇದವ್ಯಾಸ ಶಿಶುಮಂದಿರದ ಮಾತೃ ಮಂಡಳಿ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ಬೆಳಾಲು: ಶ್ರೀ ಅನಂತಪದ್ಮನಾಭ ದೇವಸ್ಥಾನ ವಾರ್ಷಿಕ ಮಹಾಸಭೆ ಹಾಗೂ ಲೆಕ್ಕಾಚಾರ ಮಂಡನೆ

Suddi Udaya

ಡಿ.30: ರೂ.1.62 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಪಡಂಗಡಿ ಪ್ರಾ.ಕೃ.ಪ.ಸ. ಸಂಘದ “ಸಮೃದ್ಧಿ” ಸಭಾಭವನ ಹಾಗೂ ಗೋದಾಮು ಕಟ್ಟಡ ಲೋಕಾರ್ಪಣೆ

Suddi Udaya
error: Content is protected !!