ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಅಳದಂಗಡಿ ಶ್ರೀ ಸತ್ಯ ದೇವತಾ ಕಲ್ಲುರ್ಟಿ ದೈವಸ್ಥಾನ ಅಳದಂಗಡಿ ಇವರ ವತಿಯಿಂದ ಜೂ.14 ರಂದು ಅಳದಂಗಡಿಯಲ್ಲಿ ನಡೆಯುವ 24 ನೇ ವರ್ಷದ ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಭಾರತೀಯ ಕಬಡ್ಡಿ ತಂಡದ ನಾಯಕ ಪವನ್ ಶೆಹ್ರಾವತ್ ಮುಖ್ಯ ಅತಿಥಿಯಾಗಿ ಆಗಮಿಸುವ ಹಿನ್ನೆಲೆಯಲ್ಲಿ ತಾಲೂಕು ಕಬಡ್ಡಿ ಅಸೋಸಿಯೇಷನ್ ಜೊತೆಗೆ ಸಮಾಲೋಚನಾ ಸಭೆಯು ಬೆಳ್ತಂಗಡಿಯಲ್ಲಿ ಜೂ.10 ರಂದು ನಡೆಯಿತು.
ಅಧ್ಯಕ್ಷತೆ ಮತ್ತು ವಿಷಯ ಮಂಡನೆಯನ್ನು ಅಳದಂಗಡಿ ಶ್ರೀ ಸತ್ಯ ದೇವತಾ ಕಲ್ಲುರ್ಟಿ ದೈವಸ್ಥಾನ ಅಳದಂಗಡಿ ಇದರ ಆಡಳಿತದಾರ ಶಿವಪ್ರಸಾದ ಅಜಿಲ ನಡೆಸಿದರು.
ಸಭೆಯಲ್ಲಿ ತಾಲೂಕು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಂಜನ್ ಜಿ ಗೌಡ, ಜಿಲ್ಲಾ ಉಪಾಧ್ಯಕ್ಷರುಗಳಾದ ಹೇರಾಜೆ ಪೀತಾಂಬರ ಬಂಗೇರ ಮತ್ತು ನಾಮದೇವ ರಾವ್ ಮುಂಡಾಜೆ, ಜಿಲ್ಲಾ ಗೌರವ ಸಲಹೆಗಾರ ಹಾಗೂ ರಾಷ್ಟ್ರೀಯ ಕಬಡ್ಡಿ ತರಬೇತುದಾರ ಕೃಷ್ಣಾನಂದ ರಾವ್ ಮುಂಡಾಜೆ, ಕಾರ್ಯಾಧ್ಯಕ್ಷ ರಾಜಶೇಖರ ಶೆಟ್ಟಿ ಮಡಂತ್ಯಾರು, ಉಪಾಧ್ಯಕ್ಷ ವಿಜಯ ಗೌಡ ವೇಣೂರು, ತಾ. ಪ್ರಧಾನ ಕಾರ್ಯದರ್ಶಿ ಪ್ರಭಾಕರ ಹೆಗ್ಡೆ ಹಟ್ಟತ್ತೋಡಿ, ತಾಲೂಕು ಕಬಡ್ಡಿ ತೀರ್ಪುಗಾರರ ಮಂಡಳಿ ಅಧ್ಯಕ್ಷ ಪ್ರಭಾಕರ ನಾರಾವಿ, ಕಬಡ್ಡಿ ಸಂಘಟಕರಾದ ಸದಾಶಿವ ಅರ್ವ ಮತ್ತು ಮಧುಸೂಧನ ಸುವರ್ಣ, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಉಪಸ್ಥಿತರಿದ್ದರು.
ಪವನ್ ಶೆಹ್ರಾವತ್ ಅವರಿಗೆ ಭವ್ಯ ಸ್ವಾಗತ ಹಾಗೂ ಮೆರವಣಿಗೆ, ಅಸೋಸಿಯೇಷನ್ ಕಡೆಯಿಂದ ಗೌರವಾರ್ಪಣೆ ಇತ್ಯಾದಿ ವಿಷಯ ಚರ್ಚಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.













