ಧರ್ಮಸ್ಥಳ : ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಬೆಳ್ತಂಗಡಿ ತಾಲ್ಲೂಕು ಘಟಕವು 25 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿದ್ದು, ರಜತ ಮಹೋತ್ಸವದ ಸಂದರ್ಭ ಪ್ರಕಟಿಸಿದ ಸ್ಮರಣಸಂಚಿಕೆ “ಪ್ರಬುದ್ಧ” ವನ್ನು ಡಾ. ಡಿ ವಿರೇಂದ್ರ ಹೆಗ್ಗಡೆಯವರಿಗೆ ಜೂ.18ರಂದು ಅರ್ಪಿಸಲಾಯಿತು.
ರಜತ ಮಹೋತ್ಸವ ಕಟ್ಟಡ ನಿರ್ಮಾಣಕ್ಕೆ ಹೆಗ್ಗಡೆಯವರು ವಿಶೇಷ ಆರ್ಥಿಕ ನೆರವು ನೀಡಿರುವುದಲ್ಲದೆ ಸಂಘದ ಚಟುವಟಿಕೆಗಳಿಗೆ ನಿರಂತರ ಮಾರ್ಗದರ್ಶನ ನೀಡುತ್ತಿರುವ ಬಗ್ಗೆ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಹೆಗ್ಗಡೆಯವರು ಸಂಘದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಣಾಧಿಕಾರಿ ಬಿ. ವಿಠಲ ಶೆಟ್ಟಿ ಮತ್ತು ಸದಸ್ಯರುಗಳಾದ ಬಿ. ಸೋಮಶೇಖರ ಶೆಟ್ಟಿ, ಜಗನ್ನಿವಾಸ ರಾವ್, ವಸಂತ ಸುವರ್ಣ ಮತ್ತು ಆರ್.ಎನ್. ಪೂವಣಿ ಉಪಸ್ಥಿತರಿದ್ದರು.












