ಬೆಳ್ತಂಗಡಿ: ಬಜಿಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇತ್ತೀಚೆಗೆ ಶಾಲಾ ಪೋಷಕರಿಂದ ಶ್ರಮದಾನ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.

ಪೋಷಕರು ಶಾಲಾ ಆವರಣದಲ್ಲಿದ್ದ ಕಳೆಗಿಡಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ನಂತರ ಶಾಲಾ ಕೈತೋಟವನ್ನು (Kitchen Garden) ವ್ಯವಸ್ಥಿತವಾಗಿ ರಚಿಸಿ, ಅದರಲ್ಲಿ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಉಪಯುಕ್ತವಾಗುವಂತಹ ಬಸಳೆ, ಬೆಂಡೆಕಾಯಿ, ಅಲಸಂಡೆ ಸೇರಿದಂತೆ ವಿವಿಧ ಬಗೆಯ ಪೌಷ್ಟಿಕಾಂಶಯುಕ್ತ ತರಕಾರಿ ಬೀಜಗಳನ್ನು ಬಿತ್ತಿ ಮಾದರಿ ಕೈತೋಟ ಮಾಡಿದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಹರೀಶ್ ಗೌಡ ಅವರ ನೇತೃತ್ವದಲ್ಲಿ ಈ ಶ್ರಮದಾನ ಕಾರ್ಯಕ್ರಮ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಶ್ರಮದಾನದಲ್ಲಿ ಪಾಲ್ಗೊಂಡರು.












