ಹತ್ಯಡ್ಕ: ಕೇಂದ್ರ ಸರ್ಕಾರದ ‘ಅಗ್ನಿಪಥ್’ ಯೋಜನೆಯಡಿ ಭಾರತೀಯ ಸಶಸ್ತ್ರ ಪಡೆಗೆ (ಅಗ್ನಿವೀರ್) ಆಯ್ಕೆಯಾದ ಹತ್ಯಡ್ಕ ಗ್ರಾಮದ ಹೊಸತೋಟ ಮುಂಡ್ರೆಲು ನಿವಾಸಿ ಭರತ್ ಅವರಿಗೆ ಕುಂಟಲಪಲ್ಕೆ ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ ಜೂ. 28ರಂದು ಅವರ ಸ್ವಗೃಹದಲ್ಲಿ ಗೌರವಪೂರ್ವಕ ಸನ್ಮಾನ ಕಾರ್ಯಕ್ರಮ ಜರುಗಿತು.
ಹೇಮಾವತಿ ಹಾಗೂ ಸುಂದರ ಗೌಡ ದಂಪತಿಯ ಪ್ರಥಮ ಪುತ್ರನಾದ ಭರತ್ ಮತ್ತು ಅವರ ತಾಯಿ ಹೇಮಾವತಿ ಅವರನ್ನು ಯುವಕ ಮಂಡಲದ ಪದಾಧಿಕಾರಿಗಳು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹತ್ಯಡ್ಕ ಗ್ರಾಮದ ನಿವೃತ್ತ ಯೋಧರಾದ ಮೋಹನ ಶೆಟ್ಟಿ ಮುದ್ದಿಗೆ ಹಾಗೂ ಮಹಾಬಲ ಎಂ ಮುದ್ದಿಗೆ ಅವರು, ತಮ್ಮ ಸೇನಾ ಅವಧಿಯ ಸ್ಮರಣೀಯ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಭರತ್ ಅವರಿಗೆ ಮುಂದಿನ ಸೇನಾ ಜೀವನಕ್ಕೆ ಶುಭ ಹಾರೈಸಿದರು.
ಕಾರ್ಯಾಗಾರದಿಂದ ಸಿಕ್ಕಿತು ಸ್ಪೂರ್ತಿ: ಸನ್ಮಾನ ಸ್ವೀಕರಿಸಿ ಮಾತನಾಡಿದ ಯುವಕ ಭರತ್, “ಈ ಹಿಂದೆ ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ ಸೇನೆಗೆ ಸೇರಬಯಸುವ ಯುವಕರಿಗಾಗಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಾಗಾರ ನನಗೆ ದೊಡ್ಡ ಸ್ಪೂರ್ತಿ ನೀಡಿತು. ಆ ಕಾರ್ಯಾಗಾರದಲ್ಲಿ ಸಿಕ್ಕ ಮಾರ್ಗದರ್ಶನದಿಂದಲೇ ನಾನು ಅಗ್ನಿವೀರ್ ಆಯ್ಕೆ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಯಿತು” ಎಂದು ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಪಿಲ ಕೇಸರಿ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಗೌಡ ಬೊಳ್ಳೋಡಿ, ಸಂಘಟನೆಯ ಪದಾಧಿಕಾರಿಗಳು ಹಾಗೂ ಊರಿನ ಯುವಕರು ಉಪಸ್ಥಿತರಿದ್ದರು. ಕಪಿಲ ಕೇಸರಿ ಸಂಸ್ಥೆಯ ಕಾರ್ಯದರ್ಶಿ ಸುಮಂತ್ ಗೌಡ ಅಳಕ್ಕೆ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.












