ಕಕ್ಕಿಂಜೆ : ಕೆ ಎಂ ಸಿ ಆಸ್ಪತ್ರೆ ತುರ್ತು ಚಿಕಿತ್ಸಾ ವಿಭಾಗ-ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ಇವರ ಸಂಯುಕ್ತ ಆಶ್ರಯದಲ್ಲಿ. ಕೆಎಂಸಿ ತುರ್ತು ಚಿಕಿತ್ಸಾ ವಿಭಾಗ – ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ಇವರ ಸಹಕಾರದೊಂದಿಗೆ, ಮನ್ಶರ್ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜು ವಿದ್ಯಾರ್ಥಿಗಳಿಗೆ “ಪ್ರಥಮ ಚಿಕಿತ್ಸೆ (First Aid,Basic Life Support) ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಶಿಬಿರವು ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ನಡೆಯಿತು.

ಕಾರ್ಯಗಾರದಲ್ಲಿ ಮನ್ಶರ್ ಅಕಾಡೆಮಿ ಗೇರುಕಟ್ಟೆ ಇಲ್ಲಿನ ಮನ್ಶರ್ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಕೆಎಂಸಿ ತುರ್ತು ಚಿಕಿತ್ಸಾ ವಿಭಾಗದ ಸಿಬ್ಬಂದಿ ಗುರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆಯ ವೈದ್ಯಕೀಯ ನಿರ್ದೇಶಕರಾದ ಡಾ.ಮುರಳಿಕೃಷ್ಣ ಇರ್ವತ್ರಾಯ ಮಾತನಾಡಿ ತುರ್ತು ಸಂದರ್ಭಗಳಲ್ಲಿ ಹಾಗೂ ಇನ್ನಿತರ ಅನಾರೋಗ್ಯ ಅಥವಾ ಅನಾಹುತಗಳು ಸಂಭವಿಸುವ ಸಮಯದಲ್ಲಿ ಜೀವ ಉಳಿಸಲು ಧೈರ್ಯ ಮಾಡಬೇಕು ಹಾಗೂ ಎದೆಗುಂದದೆ ಪ್ರಥಮ ಚಿಕಿತ್ಸೆ ನೀಡಬೇಕು, ಹೃದಯಾಘಾತ, ಪಾರ್ಶ್ವವಾಯು, ನೀರಿನಲ್ಲಿ ಮುಳುಗುವುದು, ಅಗ್ನಿ ಅವಘಡ ಹಾಗೂ ಅಪಘಾತಗಳು/ಆಘಾತ, ಹಾವು ಕಡಿತ, ನಾಯಿ ಕಡಿತ, ವಿದ್ಯುತ್ ಆಘಾತ ಮತ್ತು ಸುಟ್ಟಗಾಯಗಳು, ಸಿಡಿಲು/ಮಿಂಚು,ರಕ್ತಸ್ರಾವದ ಗಾಯಗಳು ಮುಂತಾದ ಸಂದರ್ಭಗಳಲ್ಲಿ ಪ್ರತಿಯೊಬ್ಬ ಏನು ಮಾಡಬೇಕು ಮತ್ತು ಏನು ತಪ್ಪು ಮಾಡಬಾರದು ಎಂಬುದರ ಬಗ್ಗೆ ಇನ್ನಿತರ ತುರ್ತು ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿದರು. ಹೃದಯ ಸ್ತಂಭನ ಸಂದರ್ಭದಲ್ಲಿ ಸಿಪಿಆರ್ ಕೊಡುವುದರ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿಯನ್ನು ನಡೆಸಿಕೊಟ್ಟರು. ವೈದ್ಯಕೀಯ ತುರ್ತು ಪರಿಸ್ಥಿತಿಗಳು ಮತ್ತು ವಿಪತ್ತುಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ರೋಗಿಗಳನ್ನು ಅಥವಾ ಸಂತ್ರಸ್ತರನ್ನು ನಿಭಾಯಿಸಲು ಕನಿಷ್ಠ ಮೂಲಭೂತ ಜ್ಞಾನ ಅತ್ಯಗತ್ಯ, ಜೀವ ಉಳಿಸಲು ವೈದ್ಯರೇ ಆಗಬೇಕೆಂದಿಲ್ಲ ಸಾಮಾಜಿಕ ಕಳಕಳಿ ಇರುವವರು ಯಾರು ಬೇಕಾದರೂ ಈ ಕಾರ್ಯವನ್ನು ಮಾಡಬಹುದು ಎಂದರು.
ಈ ಸಂದರ್ಭದಲ್ಲಿ ಕೆ ಎಂ ಸಿ ತುರ್ತು ಚಿಕಿತ್ಸಾ ವಿಭಾಗದ ವೈದ್ಯಾಧಿಕಾರಿ ಡಾ.ದೆವಯಾನಿ, ಮನ್ಶರ್ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲರಾದ ಹೈದರ್ ಎಂ ಮರ್ದಳ, ಉಪನ್ಯಾಸಕಿ ಶ್ರೀಮತಿ ಮಲ್ಲಿಕಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕೆಎಂಸಿ ಆಸ್ಪತ್ರೆ ತುರ್ತು ಚಿಕಿತ್ಸಾ ವಿಭಾಗದ ಪಿ ಆರ್ ಓ ಶ್ರೀಮತಿ ಸುಪ್ರೀತಾ, ಹಾಗೂ ಶ್ರೀ ಕೃಷ್ಣ ಆಸ್ಪತ್ರೆಯ ಸಿಬ್ಬಂದಿಗಳಾದ ಗಣೇಶ್, ಜಿಲ್ಸನ್ ಮ್ಯಾಥ್ಯೂ, ಹೈದರ್, ಆರೀಶ್ ಸಹಕರಿಸಿದರು.












