ಬೆಳ್ತಂಗಡಿ: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಅವಧಿಯನ್ನು ಪುನಃ ವಿಸ್ತರಿಸಲಾಗಿದೆ. ಅದರಂತೆ ಗಣತಿ ನಮೂನೆಗಳ ಸಲ್ಲಿಕೆಗೆ ಆ. 8ರ ಬದಲು ಆ. 17 ಕೊನೆಯ ದಿನವಾಗಿದೆ.
ಗಣತಿ ನಮೂನೆಗಳ ಭರ್ತಿ ಹಾಗೂ ವಾಪಸ್ ಸಲ್ಲಿಕೆ ಸಂದರ್ಭದಲ್ಲಿ ರಾಜ್ಯದಲ್ಲಿ ಗೈರು, ನಿಧನ, ಶಾಶ್ವತ ಸ್ಥಳಾಂತರ, ನಕಲಿ, ಇತರ (ಎಎಸ್ಡಿಡಿಒ) ದೊಡ್ಡ ಸಂಖ್ಯೆಯಲ್ಲಿ (1.10 ಕೋಟಿ) ಆಗಿರುವುದರಿಂದ ಅವುಗಳ ಪರಿಶೀಲನೆಗೆ ರಾಜಕೀಯ ಪಕ್ಷಗಳು ಹಾಗೂ ಮತದಾರರಿಗೆ ಅವಕಾಶ ನೀಡಲು ಅವಧಿಯನ್ನು ವಿಸ್ತರಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಚುನಾವಣ ಆಯೋಗದ ಪರಿಷ್ಕೃತ ವೇಳಾಪಟ್ಟಿ ಯಂತೆ ಕರಡು ಮತದಾರರ ಪಟ್ಟಿ ಆ. 24ರಂದು ಪ್ರಕಟವಾಗಲಿದೆ. ಆಕ್ಷೇಪಣೆ ಸಲ್ಲಿಸಲು ಆ. 24ರಿಂದ ಸೆ.23, ನೋಟಿಸ್ ಜಾರಿ, ಅವುಗಳ ಪರಿಶೀಲನೆ, ಇತ್ಯರ್ಥಕ್ಕೆ ಆ. 24ರಿಂದ ಅ. 22ರ ವರೆಗೆ ಅವಕಾಶ ಇರಲಿದೆ. ಅ. 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.













