ಗೇರುಕಟ್ಟೆ: ಆತ್ಮವಿಶ್ವಾಸ ಮತ್ತು ಸಾಧಿಸುವ ಛಲಕ್ಕೆ ಯಾವುದೇ ಮಿತಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿರುವ ಗೇರುಕಟ್ಟೆಯ ಯುವಕ ಚಿರಂಜೀವಿ ಶೆಟ್ಟಿ (ಚಿರು) ಅವರು ‘ಚಿರು ಟೀಮ್’ ಎಂಬ ಹೆಸರಿನಲ್ಲಿ ವಿಡಿಯೋಗ್ರಫಿ ಹಾಗೂ ವಿಡಿಯೋ ಎಡಿಟಿಂಗ್ ಉದ್ಯಮವನ್ನು ಆರಂಭಿಸಿದ್ದಾರೆ. ವಿಕಲಚೇತನರಾಗಿದ್ದರೂ ತಮ್ಮ ದೈಹಿಕ ಸವಾಲುಗಳನ್ನು ಮೆಟ್ಟಿನಿಂತು, ತಮ್ಮಲ್ಲಿರುವ ಪ್ರತಿಭೆ ಹಾಗೂ ಕೌಶಲ್ಯವನ್ನು ನಂಬಿ ಸ್ವಂತ ಉದ್ಯಮ ಆರಂಭಿಸಿರುವ ಚಿರಂಜೀವಿ ಶೆಟ್ಟಿ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾಗಿದೆ. ಅವರ ಈ ಸಾಧನೆ ಇತರ ಯುವಕರಿಗೂ ಪ್ರೇರಣೆಯಾಗುವಂತದ್ದು.ಇಂದು ಸತ್ಯ ದೇವತೆ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಚಿರು ಟೀಮ್’ ತಂಡದ ಜರ್ಸಿ ಅನಾವರಣವನ್ನು ಮಾಡಿ, ಈ ಸಂದರ್ಭದಲ್ಲಿ ಚಿರಂಜೀವಿ ಶೆಟ್ಟಿ ಅವರ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿ, ಅವರ ಉದ್ಯಮ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಲಾಯಿತು.
ಅಂಗವಿಕಲರಾಗಿರುವ ಅವರಿಗೆ ವಿಡಿಯೋಗ್ರಫಿ ಮೂಲಕ ಜೀವನ್ ಶೈಲೇಶ್ ಅಳದಂಗಡಿ, ಸೃಜನ್ ವೇಣೂರು , ಇವರು ಸಹಾಯ ಮಾಡುತ್ತಿದ್ದಾರೆ ಇಂದಿನ ಡಿಜಿಟಲ್ ಯುಗದಲ್ಲಿ ವಿಡಿಯೋಗ್ರಫಿ ಮತ್ತು ಎಡಿಟಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು, ತಮ್ಮ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಚಿರು ಮುಂದಾಗಿದ್ದಾರೆ. ದೈಹಿಕ ಸವಾಲುಗಳನ್ನು ಮೀರಿ ಸ್ವಂತ ಉದ್ಯಮ ಆರಂಭಿಸಿರುವುದು ಅವರ ಆತ್ಮವಿಶ್ವಾಸ, ಸ್ವಾವಲಂಬನೆ ಮತ್ತು ಸಾಧಿಸುವ ಛಲಕ್ಕೆ ಸಾಕ್ಷಿಯಾಗಿದೆ.
“ಮನಸ್ಸಿದ್ದರೆ ಮಾರ್ಗ” ಎಂಬ ಮಾತಿನಂತೆ, ಯಾವುದೇ ಸವಾಲು ಎದುರಾದರೂ ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧ್ಯ ಎಂಬುದನ್ನು ಚಿರು ಅವರ ಪ್ರಯತ್ನ ತೋರಿಸಿಕೊಡುತ್ತದೆ.‘ಚಿರು ಟೀಮ್’ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಗಳಿಸಿ, ಉತ್ತಮ ಗುಣಮಟ್ಟದ ವಿಡಿಯೋಗ್ರಫಿ ಮತ್ತು ಎಡಿಟಿಂಗ್ ಸೇವೆಯ ಮೂಲಕ ಜನರ ಮೆಚ್ಚುಗೆ ಗಳಿಸಲಿ. ಚಿರಂಜೀವಿ ಶೆಟ್ಟಿ ಅವರ ಕನಸುಗಳು ನನಸಾಗಲಿ ಹಾಗೂ ಅವರ ಈ ಪ್ರಯತ್ನ ಇನ್ನಷ್ಟು ಯುವಕರಿಗೆ ಪ್ರೇರಣೆಯಾಗಲಿ ಎಂದು ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಕೇಶ್ ಹೆಗಡೆ ಅವರು ಹಾರೈಸಿದ್ದಾರೆ.












