ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಸ್ವಾಯತ್ತ ಕಾಲೇಜಿನ ರಾಸಾಯನ ಶಾಸ್ತ್ರ ವಿಭಾಗದ ವತಿಯಿಂದ ಅಕ್ಟೋಬರ್ 08 ಮತ್ತು 09ರಂದು ಆರೋಗ್ಯ, ಪರಿಸರ ಸುಸ್ಥಿರತೆ ಮತ್ತು ಕೈಗಾರಿಕಾ ಪರಿವರ್ತನೆಗೆ ರಸಾಯನಶಾಸ್ತ್ರದ ಕೊಡುಗೆ ವಿಚಾರದ ಕುರಿತು ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ‘ ಕೆಮ್ಸಿನ್–2026’ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದ ಆಮಂತ್ರಣ ಪತ್ರಿಕೆ ಹಾಗು ಕಾರ್ಯಾಗಾರದ ಉದ್ದೇಶ ಮತ್ತು ವಿವರಣೆಯನ್ನು ಹೊಂದಿರುವ ಮಾಹಿತಿ ಕೈಪಿಡಿಯನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಬಿಡುಗಡೆಗೊಳಿಸಿದರು.
ಸಮ್ಮೆಳನವು ಆರೋಗ್ಯ ಕ್ಷೇತ್ರದ ಪ್ರಗತಿ, ಪರಿಸರ ಸುಸ್ಥಿರತೆ ಹಾಗೂ ಕೈಗಾರಿಕಾ ಪರಿವರ್ತನೆಯಲ್ಲಿ ರಸಾಯನಶಾಸ್ತ್ರದ ಮಹತ್ವ, ನೂತನ ಸಂಶೋಧನೆಗಳು ಮತ್ತು ತಂತ್ರಜ್ಞಾನ ಬೆಳವಣಿಗೆಗಳ ಕುರಿತಾದ ಚರ್ಚೆ ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ. ದೇಶದ ವಿವಿಧ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳು,ವಿಶ್ವವಿದ್ಯಾಲಯಗಳು ಹಾಗೂ ಕೈಗಾರಿಕಾ ಕ್ಷೇತ್ರದ ತಜ್ಞರು ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಸಂಶೋಧನಾ ಅನುಭವ ಮತ್ತು ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.
ಬಿಡುಗಡೆ ಸಂದರ್ಭದಲ್ಲಿ ಪ್ರಾಚಾರ್ಯರಾದ ಪ್ರೋ ವಿಶ್ವನಾಥ್ ಪಿ, ಸಮ್ಮೇಳನದ ಸಂಚಾಲಕಿ, ಕಾಲೇಜಿನ ಉಪಪ್ರಾಂಶುಪಾಲೆ ಹಾಗೂ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ನಂದಾ ಕುಮಾರಿ ಕೆ. ಪಿ., ಸಹ-ಸಂಚಾಲಕಿ ದಿವ್ಯಾ ಹಾಗೂ ಆಯೋಜನಾ ಕಾರ್ಯದರ್ಶಿ ಡಾ. ಗನವಿ ಡಿ. ಸೇರಿದಂತೆ ಪರೀಕ್ಷಾಂಗ ಕುಲಸಚಿವ ಪ್ರೊ ಬಿ. ಗಣೇಶ್ ನಾಯಕ್, ಸ್ನಾತಕೋತ್ತರ ಅಧ್ಯಯನಗಳ ಡೀನ್ ಡಾ. ಸೌಮ್ಯ ಬಿ. ಪಿ., ಉಪನ್ಯಾಸಕರಾದ ಸಂಗೀತಾ ಬಿ. ಹಾಗೂ ಅಶೋಕ್ ಉಪಸ್ಥಿತರಿದ್ದರು.
ರಸಾಯನಶಾಸ್ತ್ರ ಕ್ಷೇತ್ರದ ಸಂಶೋಧಕರು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಕೈಗಾರಿಕಾ ವಲಯದ ತಜ್ಞರನ್ನು ಒಂದೇ ವೇದಿಕೆಗೆ ಕರೆತರುವ ಮೂಲಕ, ಸಂಶೋಧನಾ ವಿಚಾರಗಳ ವಿನಿಮಯ, ಜ್ಞಾನ ಹಂಚಿಕೆ ಹಾಗೂ ಹೊಸ ಸಹಯೋಗಗಳಿಗೆ ಈ ರಾಷ್ಟ್ರೀಯ ಸಮ್ಮೇಳನವು ಮಹತ್ವದ ವೇದಿಕೆಯಾಗಲಿದೆ.











