ಬೆಳ್ತಂಗಡಿ: ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಮಳಿಗೆಯಲ್ಲಿ ಸಹೋದರ ಭಾವೈಕ್ಯತೆಯ ಸಂಕೇತವಾದ ರಕ್ಷಾಬಂಧನ ಕಾರ್ಯಕ್ರಮ ಆ.28ರಂದು ಸಂಭ್ರಮದಿಂದ ನಡೆಯಿತು.
ಮಳಿಗೆಯ ಮಹಿಳಾ ಸಿಬ್ಬಂದಿಗಳು ಸಹೋದರ ಸಿಬ್ಬಂದಿಗಳಿಗೆ ಆರತಿ ಎತ್ತಿ, ತಿಲಕವಿಟ್ಟು ರಕ್ಷೆ ಕಟ್ಟಿ ಸಹೋದರತ್ವದ ಭಾವವನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಸುದ್ದಿ ಉದಯ ಪತ್ರಿಕೆಯ ಮುಖ್ಯಸ್ಥ ಸಂತೋಷ್ ಪಿ. ಕೋಟ್ಯಾನ್ ಬಳಂಜ ಮಾತನಾಡಿ, ಭಾರತೀಯ ಸನಾತನ ಧರ್ಮದ ಆಚಾರ-ವಿಚಾರಗಳು ಶ್ರೀಮಂತವಾಗಿದ್ದು, ಸಹೋದರಿಯ ರಕ್ಷಣೆ, ಪ್ರೀತಿ, ಭಾವೈಕ್ಯತೆ ಹಾಗೂ ಸಹೋದರತ್ವದ ಸಂಕೇತವೇ ರಕ್ಷಾಬಂಧನ. ಸೋಜಾ ಸಂಸ್ಥೆಯು ಭಾರತೀಯತೆಯನ್ನು ಪ್ರತಿಪಾದಿಸುತ್ತಾ ಸರ್ವಧರ್ಮಗಳ ಹಬ್ಬಗಳನ್ನು ತನ್ನ ಸಿಬ್ಬಂದಿಯೊಂದಿಗೆ ಆಚರಿಸಿ ಎಲ್ಲರೊಂದಿಗೆ ಬೆರೆಯುತ್ತಿರುವುದು ಗಮನಾರ್ಹ ಎಂದರು.

ಸೋಜಾ ಸಂಸ್ಥೆಯ ಮಾಲಕರಾದ ಅಲ್ಫೋನ್ಸ್ ಫ್ರಾಂಕೋ ಮಾತನಾಡಿ, ಜಾತಿ, ಮತ, ಧರ್ಮಗಳ ಸಂಘರ್ಷದಿಂದ ಮಾನವೀಯತೆ ಕ್ಷೀಣಿಸುತ್ತಿದೆ. ಭಾರತೀಯರಾದ ನಾವು ಇಲ್ಲಿ ವಾಸಿಸುವ ಎಲ್ಲರ ಧರ್ಮ ಮತ್ತು ಆಚರಣೆಗಳನ್ನು ಗೌರವಿಸಿ, ಸಮಾನತೆ ಹಾಗೂ ಸಹೋದರತ್ವದಿಂದ ಬಾಳಬೇಕು. ನಮ್ಮಲ್ಲಿ ಪರಸ್ಪರ ಒಡನಾಟ ಮತ್ತು ಭಾವೈಕ್ಯತೆಯ ಸಂಬಂಧಗಳು ರೂಢಿಯಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಇಂಜಿನಿಯರ್ ರಾಹುಲ್, ಸುದ್ದಿ ಉದಯ ಪತ್ರಿಕೆಯ ವರದಿಗಾರ ಮನೀಷ್ ಅಂಚನ್, ಸೋಜಾ ಸಂಸ್ಥೆಯ ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.











