ಬೆಳ್ತಂಗಡಿ: ಲಾಯಿಲ ದಯಾ ವಿಶೇಷ ಶಾಲೆಯಲ್ಲಿ ಸೆ. 5ರಂದು ಶಿಕ್ಷಕರ ದಿನಾಚರಣೆಯ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಭಾರತದ ಖ್ಯಾತ ತತ್ವಜ್ಞಾನಿ, ಶಿಕ್ಷಣತಜ್ಞ ಹಾಗೂ ಮಾಜಿ ರಾಷ್ಟ್ರಪತಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣಾರ್ಥ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿದ್ಯಾರ್ಥಿ ಹಾಗೂ ಶಿಕ್ಷಕರು ಪ್ರಾರ್ಥನಾ ಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ.ಪೌಲಿನ್ ರೆಗೋ ರವರು ಮಾಲಾರ್ಪಣೆಯನ್ನು ಮಾಡಿ, ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಭಾವಚಿತ್ರಕ್ಕೆ ಪುಷ್ಪರ್ಚಾನೆಯನ್ನು ಸಲ್ಲಿಸುವ ಮೂಲಕ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ ಉದ್ಘಾಟಕರ ಸ್ಥಾನದಿಂದ ಮಾತನಾಡಿದ ಶ್ರೀಮತಿ ಪೌಲಿನ್ ರೆಗೋ ರವರು ದಯಾ ವಿಶೇಷ ಶಾಲೆಯಂತಹ ಸಂಸ್ಥೆಯನ್ನು ನಮ್ಮ ಈ ತಾಲೂಕಿನಲ್ಲಿ ಹುಟ್ಟು ಹಾಕಿರುವುದು ದೇವರ ವರವೆನ್ನಬಹುದು. ಪ್ರತಿಯೊಂದು ಮಗುವಿಗೂ ಒಬ್ಬೊಬ್ಬ ಶಿಕ್ಷಕರು ಒಂದೊಂದು ಆಧಾರ ಸ್ಥಂಭಗಳಾಗಿರುತ್ತಾರೆ. ಎಲ್ಲಾ ಮಕ್ಕಳು ತಮ್ಮ ಶಿಕ್ಷಕರಿಗೋಸ್ಕರ ದೇವರಲ್ಲಿ ಪ್ರಾರ್ಥಿಸಬೇಕು. ಇಲ್ಲಿರುವ ಪ್ರತಿಯೊಂದು ಮಗುವಿನ ಮುಖದಲ್ಲೂ ನಗುವಿದೆ ಹಾಗೂ ಅವರ ನಲಿವನ್ನು ಕಂಡಾಗ ಅವರಿಗಿಲ್ಲಿ ಅವರ ಶಿಕ್ಷಕರು ಉತ್ತಮ ಆಧಾರವಾಗಿದ್ದಾರೆ ಎಂದು ತಿಳಿದುಬರುತ್ತದೆ.
ಶ್ರೀಮತಿ ಪೌಲಿನ್ ರೆಗೋ ರವರು ದಯಾ ವಿಶೇಷ ಶಾಲೆ ಹಾಗೂ ಮಕ್ಕಳಿಗಾಗಿ ನೀಡುತ್ತಿರುವ ಸಹಾಯ ಸಹಕಾರಗಳನ್ನು ಪರಿಗಣಿಸಿ ಅವರನ್ನು ಸಂಸ್ಥೆಯ ನಿರ್ದೇಶಕರಾದ ವಂ.ಫಾ.ವಿನೋದ್ ಮಸ್ಕರೇನಸ್ ಹಾಗೂ ವೇದಿಕೆಯಲ್ಲಿದ್ದ ಅತಿಥಿಗಳು ಕಿರುಕಾಣಿಕೆಯನ್ನು ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷ ವಂ.ಫಾ.ವಿನೋದ್ ಮಸ್ಕರೇನಸ್ ರವರು ಮಾತನಾಡಿ, ದಯಾ ವಿಶೇಷ ಶಾಲೆಯಲ್ಲಿ ಈ ವಿಶೇಷ ಮಕ್ಕಳ ಸೇವೆಯನ್ನು ಮಾಡುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯವನ್ನು ಕೋರಿದರು. ಒಬ್ಬ ಶಿಕ್ಷಕನು ಕಲಿಕೆಯಲ್ಲಿ ಯಾವಾಗಲೂ ಒಬ್ಬ ವಿದ್ಯಾರ್ಥಿಯಾಗಿದ್ದರೆ ಮಾತ್ರ ಮುಂದೆ ಅವನು ಒಬ್ಬ ಉತ್ತಮ ಶಿಕ್ಷಕನಾಗಿರುತ್ತಾನೆ. ಮೊದಲು ಪ್ರತಿಯೊಬ್ಬ ಶಿಕ್ಷಕನೂ ಪ್ರತಿಯೊಂದು ಮಗುವನ್ನು ಸರಿಯಾಗಿ ಅರಿತುಕೊಳ್ಳಬೇಕು. ಹಾಗಿದ್ದಲ್ಲಿ ಮಾತ್ರವೇ ಶಿಕ್ಷಕನಲ್ಲಿ ಉತ್ತಮ ತಾಳ್ಮೆ ಮತ್ತು ಒಳ್ಳೆಯ ಮನೋಭಾವ ಬೆಳೆಯಲು ಸಾಧ್ಯ. ಪ್ರತಿಯೊಂದು ಮಗುವಿನ ಅಂತರಾಳದಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರತೆಗೆಯಲು ಸಾಧ್ಯವಾದರೆ ಮಾತ್ರವೇ ಒಬ್ಬ ಶಿಕ್ಷಕ ತನ್ನ ಕರ್ತವ್ಯದಲ್ಲಿ ಯಶಸ್ವಿಯಾಗುತ್ತಾನೆ ಎಂದರು.
ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಲ್ಲಾ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಸಂಸ್ಥೆಯ ವತಿಯಿಂದ ಕಿರು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಶಿಕ್ಷಕರಿಗೆ ಶುಭಾಶಯಗಳನ್ನು ಸಲ್ಲಿಸಿ, ಅವರು ತಮ್ಮ ಪ್ರೀತಿ ಹಾಗೂ ಗೌರವವನ್ನು ವ್ಯಕ್ತಪಡಿಸಿದರು.
ಮುಖ್ಯ ಶಿಕ್ಷಕಿ ದಿವ್ಯಾ ಟಿ ವಿ ಸ್ವಾಗತಿಸಿ, ನಿರೂಪಿಸಿದರು., ಆಪ್ತಸಮಾಲೋಚಕರಾದ ಮೆರಿನ್ ಎಂ.ಪಿ ವಂದಿಸಿದರು.












