ಬೆಳ್ತಂಗಡಿಯ ಸೌಜನ್ಯ ಕೊಲೆ ಪ್ರಕರಣ ವಿಚಾರದಲ್ಲಿ ಆರೋಪ ಎದುರಿಸುತ್ತಿರುವ ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ್ ಜೈನ್ ಕಾನತ್ತೂರು ಕ್ಷೇತ್ರದಲ್ಲಿ ಮತ್ತೆ ಪ್ರಮಾಣ ಪೂರೈಕೆ ಮಾಡುವ ಮೂಲಕ ಆಪಾದನೆ ಮಾಡುವವರಿಗೆ ಸವಾಲೆಸೆದಿದ್ದಾರೆ.

ಫೆ.30ರಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಈ ಮೂವರು ‘ನಮ್ಮ ಮೇಲೆ ವಿನಾಕಾರಣ ಆರೋಪ ಮಾಡಲಾಗುತ್ತಿದೆ. ಇದರಿಂದ ಮನ ನೊಂದಿರುವ ನಾವು 10 ದಿನದೊಳಗೆ ಕಾಸರಗೋಡಿನ ಕಾನತ್ತೂರು ಶ್ರೀ ನಾಲ್ವರ್ ದೇವಸ್ಥಾನಕ್ಕೆ ತೆರಳಿ ಪ್ರಮಾಣ ಮಾಡಿರುವುದಾಗಿ ಹೇಳಿದ್ದೆವು. ಅದರಂತೆ ಕಾನತ್ತೂರು ಕ್ಷೇತ್ರಕ್ಕೆ ತೆರಳಿ ಪ್ರಕರಣಕ್ಕೆ ಸಂಬಂಧಿಸಿ ಪ್ರಮಾಣ ಮಾಡಲು ಒಂದು ದಿನಾಂಕವನ್ನು ನೀಡಬೇಕೆಂದು ಆಡಳಿತ ಮಂಡಳಿಗೆ ಮನವಿ ಮಾಡಿದ್ದೆವು. ಆದರೆ ಅವರು ಈಗಾಗಲೇ ಒಮ್ಮೆ ನೀವು ಬಂದು ದೂರು ನೀಡಿರುತ್ತೀರಿ. ಅದು ಅರ್ಧದಲ್ಲೇ ನಿಂತಿರುತ್ತದೆ. ಮತ್ತೊಮ್ಮೆ ನೀವು ಆಣೆ-ಪ್ರಮಾಣ ಮಾಡುವುದಿದ್ದಲ್ಲಿ 2 ಕಡೆಯವರು ಬಂದು ನಿಮ್ಮ ಸ್ವ-ಇಚ್ಛೆಯಲ್ಲಿ ಮಾಡಬಹುದು’ ಎಂದು ತಿಳಿಸಿದ್ದಾರೆ. ಅದರಂತೆ ನಾವು ದೈವಗಳ ಮುಂದೆ ಜು.4ರಂದು ಪ್ರಮಾಣ ಮಾಡಿದ್ದೇವೆ. ಈಗಾಗಲೇ ನಮ್ಮ ಮೇಲೆ ಆಪಾದನೆ ಮಾಡಿದ ವ್ಯಕ್ತಿಗಳು ಪ್ರಮಾಣ ಮಾಡಲು ಸಿದ್ಧರೆಂದು ಹೇಳಿಕೆ ನೀಡಿದ್ದು, ಆ ಮಾತಿನಂತೆ ಕಾನತ್ತೂರಿಗೆ ತೆರಳಿ ಆಣೆ ಪ್ರಮಾಣ ಮಾಡಲಿ. ಈ ಬಗ್ಗೆ ನಮಗೆ ಮುಂಚಿತವಾಗಿ ತಿಳಿಸಿದ್ದಲ್ಲಿ ಸಮಕ್ಷಮದಲ್ಲಿ ಮತ್ತೊಮ್ಮೆ ಪ್ರಮಾಣ ಮಾಡಲು ಸಿದ್ಧರಿದ್ದೇವೆ ಎಂದು ಮಲ್ಲಿಕ್ ಜೈನ್, ಉದಯ್ ಜೈನ್, ಧೀರಜ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












