25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದೊಂದಿಗೆ ಭಾರತೀಯ ಜೀವ ವಿಮಾ ನಿಗಮದಿಂದ 333 ವಿಮಾ ಗ್ರಾಮಗಳ ಘೋಷಣೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯಂತೆ ಗ್ರಾಮಾಭಿವೃದ್ಧಿ ಯೋಜನೆಯು ಸ್ವ ಸಹಾಯ ಸಂಘಗಳ ಸದಸ್ಯರಿಗೆ ಮತ್ತು ಅವರ ಕುಟುಂಬಗಳಿಗೆ ವಿಮಾ ಭದ್ರತೆಯನ್ನು ನೀಡುವ ಕೆಲಸವನ್ನು ಕಳೆದ ಎರಡು ದಶಕಗಳಿಂದ ಮಾಡುತ್ತಾ ಬಂದಿದೆ. ಸಂಪೂರ್ಣ ಸುರಕ್ಷಾ/ ಆರೋಗ್ಯ ರಕ್ಷಾ ವಿಮಾ ಯೋಜನೆ, ಯೋಜನೆಯ ಸದಸ್ಯರ ಸಾಲಗಳಿಗೆ ಭದ್ರತೆಗಾಗಿ ‘ ಪ್ರಗತಿ ರಕ್ಷಾ ಕವಚ’, ಎನ್.ಪಿ.ಎಸ್, ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಭಾರತೀಯ ಜೀವ ವಿಮಾ ನಿಗಮದ ಸಹಯೋಗದೊಂದಿಗೆ ಜೀವನಮಧುರ / ಭಾಗ್ಯಲಕ್ಷ್ಮಿ , ಮೈಕ್ರೋಬಚತ್ ಮತ್ತು ಭೀಮಾ ಜ್ಯೋತಿ ಮುಂತಾದ ಹಲವಾರು ವಿಮಾ ಸೌಲಭ್ಯಗಳ ಪ್ರಯೋಜನವನ್ನು ಈಗಾಗಲೇ ರಾಜ್ಯದ ಸುಮಾರು 23,27,650 ರಷ್ಟು ಮಂದಿ ಪಡೆದಿರುತ್ತಾರೆ.


ಯೋಜನೆಯ ಸಂಘಗಳ ಸದಸ್ಯರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ 2007 ರಿಂದ ಗ್ರಾಮಾಭಿವೃದ್ಧಿ ಯೋಜನೆಯು ಭಾರತೀಯ ಜೀವ ವಿಮಾ ನಿಗಮದೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಕಡಿಮೆ ಪ್ರೀಮಿಯಂನ ವಿಶೇಷ ಪಾಲಿಸಿಗಳನ್ನು ಪರಿಚಯಿಸಲಾಗುತ್ತಿದೆ. ಪ್ರಸ್ತುತ ‘ಮೈಕ್ರೋಬಚತ್’ ಮತ್ತು ‘ಭಿಮಾ ಜ್ಯೋತಿ’ ಎಂಬ ಹೆಸರಿನ ಎರಡು ಪಾಲಿಸಿಗಳ ಪ್ರಯೋಜನವನ್ನು ಸದಸ್ಯರು ಪಡೆಯುತ್ತಿದ್ದಾರೆ.

ಮೈಕ್ರೋಬಚತ್ ಪಾಲಿಸಿಯಡಿ ವಿಮಾ ಗ್ರಾಮಗಳನ್ನು ಗುರುತಿಸುವ ವಿಶೇಷ ಕಾರ್ಯವನ್ನು ಭಾರತೀಯ ಜೀವ ವಿಮಾ ನಿಗಮವು ಮಾಡುತ್ತಿದೆ. ಈಗಾಗಲೇ ರಾಜ್ಯದಾದ್ಯಂತ 13,71,೦೦೦ ಮಂದಿ ಮೈಕ್ರೋಬಚತ್ ಪಾಲಿಸಿಗಳನ್ನು ಮಾಡಿಸಿರುತ್ತಾರೆ.


ಏನಿದು ವಿಮಾ ಗ್ರಾಮ ?
ಪ್ರತಿ ಗ್ರಾಮದ ಜನಸಂಖ್ಯೆ ಮತ್ತು ಅಲ್ಲಿ ಮಾಡಲಾದ ಮೈಕ್ರೋಬಚತ್ ಪಾಲಿಸಿಯ ಆಧಾರದಲ್ಲಿ ವಿಮಾ ಗ್ರಾಮಗಳನ್ನು ಗುರುತಿಸುವ ಕೆಲಸವನ್ನು ಭಾರತೀಯ ಜೀವ ವಿಮಾ ನಿಗಮವು ಮಾಡುತ್ತದೆ.

ವಿಮಾಗ್ರಾಮದ ಸೌಲಭ್ಯ ಪಡೆಯಲು ಮಾನದಂಡಗಳು:
1. 2000 ಜನರಿರುವ ಗ್ರಾಮದಲ್ಲಿ ಕನಿಷ್ಠ 75 ಮಂದಿ ವಿಮೆಗೆ ನೊಂದಾಯಿಸಿರಬೇಕು.
2. ಜನಸಂಖ್ಯೆ 5೦೦೦ ಮಂದಿ ಇರುವಲ್ಲಿ ಕನಿಷ್ಠ 1೦೦ ಮಂದಿ ವಿಮಾ ಯೋಜನೆಗೆ ನೊಂದಾಯಿಸಿರಬೇಕು.
3. ಜನಸಂಖ್ಯೆ 5೦೦೧ ರಿಂದ 10೦೦೦ ಇರುವಲ್ಲಿ ಕನಿಷ್ಠ 15೦ ವಿಮೆ ನೊಂದಾಯಿಸಿರಬೇಕು.
4. ಗ್ರಾಮ ಪಂಚಾಯತ್ ವತಿಯಿಂದ ಗ್ರಾಮದ ಜನಸಂಖ್ಯೆಯ ಕುರಿತು ದೃಢೀಕರಣ ನೀಡುವುದು ಕಡ್ಡಾಯ

.ಈವರೆಗೆ ನೀಡಲಾದ ಸೌಲಭ್ಯಗಳು :
ಈಗಾಗಲೇ 2019 ರಿಂದ ರಾಜ್ಯದಾದ್ಯಂತ 333 ವಿಮಾ ಗ್ರಾಮಗಳನ್ನು ಗುರುತಿಸಲಾಗಿದೆ. ಆಯ್ಕೆಯಾದ ಗ್ರಾಮಗಳಿಗೆ ಒಂದು ಘಟಕಕ್ಕೆ ರೂ 35,೦೦೦/- ದಿಂದ 1,೦೦,೦೦೦/- ದವರೆಗಿನ ವೆಚ್ಚದಲ್ಲಿ ಈ ಕೆಳಗಿನ ಯಾವುದಾದರೂ ಒಂದು ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಈ ಯೋಜನೆಯಡಿ ಶಾಲೆ / ಗ್ರಾಮ ಪಂಚಾಯತ್/ ದೇವಸ್ಥಾನಗಳಿಗೆ ಕುಡಿಯುವ ನೀರಿನ ವ್ಯವಸ್ಥೆ (ನೀರಿನ ಟ್ಯಾಂಕ್, ಶುದ್ಧ ಕುಡಿಯುವ ನೀರಿನ ಘಟಕ), ಶಾಲೆಗಳಿಗೆ ಶೌಚಾಲಯ, ಸೋಲಾರ್ ದಾರಿದೀಪ ಮತ್ತು ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಒಳಗೊಂಡಿರುತ್ತದೆ.
ವಿಮಾ ಗ್ರಾಮದಡಿ ಈಗಾಗಲೇ ಸೌಲಭ್ಯ ನೀಡಲಾದ ವಿವರಗಳು:
1. ಶಾಲೆಗಳಿಗೆ ಹಾಗೂ ದೇವಸ್ಥಾನಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಒದಗಣೆ 225
2. ದೇವಸ್ಥಾನಗಳಿಗೆ ಹಾಗೂ ಸಾರ್ವಜನಿಕ ಜಂಕ್ಷನ್‌ಗಳಿಗೆ ಸೋಲಾರ್ ಲೈಟ್ ಅಳವಡಿಕೆ 72
3. ಶಾಲೆಗಳಿಗೆ ಹಾಗೂ ದೇವಸ್ಥಾನಗಳಿಗೆ ಶೌಚಾಲಯ ವ್ಯವಸ್ಥೆ 33
4. ಶಾಲೆಗಳಿಗೆ ಡೆಸ್ಕ್-ಬೆಂಚು

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 140 ವಿದ್ಯಾರ್ಥಿಗಳಿದ್ದು, ಹಾಗೂ ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 320 ವಿದ್ಯಾರ್ಥಿಗಳಿದ್ದು, ಈ ಎರಡು ಶಾಲೆಗಳಿಲ್ಲಿಯೂ ವಿದ್ಯಾರ್ಥಿಗಳು ಇದುವರೆಗೆ ತಮ್ಮ ಮನೆಗಳಿಂದ ಕುಡಿಯುವ ನೀರನ್ನು ತರುತ್ತಿದ್ದರು. ಪ್ರಸ್ತುತ ಸದ್ರಿ ಘಟಕ ಸ್ಥಾಪನೆಯಿಂದಾಗಿ ಎಲ್ಲರಿಗೂ ಕುಡಿಯಲು ಶುದ್ಧನೀರು ದೊರಕುತ್ತಿದ್ದು ತುಂಬಾ ಪ್ರಯೋಜನವಾಗಿದೆ.

ಚಾಮರಾಜನಗರ ತಾಲೂಕಿನ ಕುಗ್ರಾಮವಾದ ನಾಗವಳ್ಳಿ ಕೊಂಗನಾಡು ಮಾರಮ್ಮ ದೇವಸ್ಥಾನಕ್ಕೆ ಸೋಲಾರ್ ಬೀದಿ ದೀಪ ಅಳವಡಿಸಲಾಗಿದ್ದು, ಪ್ರಸ್ತುತ ಸದ್ರಿ ಘಟಕ ಸ್ಥಾಪನೆಯಿಂದಾಗಿ ತಮ್ಮ ಗ್ರಾಮದ ದೇವಸ್ಥಾನದ ಆಸುಪಾಸಿನಲ್ಲಿ ರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕರಿಗೆ ಹಾಗೂ ಜಾತ್ರಾ ಸಂದರ್ಭದಲ್ಲಿ ಬಂದ ಎಲ್ಲಾ ಭಕ್ತಾದಿಗಳಿಗೆ ಸೋಲಾರ್ ದೀಪದ ಬೆಳಕು ತುಂಬಾ ಪ್ರಯೋಜನವಾಗಿದೆ.

ಈಗಾಗಲೇ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಲ್ಲಿ ರಾಜ್ಯದಾದ್ಯಂತ 333 ವಿಮಾ ಗ್ರಾಮಗಳನ್ನು ಗುರುತಿಸಿ ರೂ 1,22,88,016/- ವೆಚ್ಚದ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಾದ ಡಾ| ಎಲ್.ಎಚ್. ಮಂಜುನಾಥ್‌ರವರು ತಿಳಿಸಿದ್ದಾರೆ.

Related posts

ಉಜಿರೆ: ಡಾ. ಬಿ. ಯಶೋವರ್ಮ ಅವರ ಸ್ಮರಣಾರ್ಥ ‘ಯಶೋವನ’ ಲೋಕಾರ್ಪಣೆ

Suddi Udaya

ಬೆಳಾಲು ಶ್ರೀಧ.ಮಂ. ಪ್ರೌಢಶಾಲೆಯಲ್ಲಿ ವಿಶ್ವ ಮಾನವ ದಿನಾಚರಣೆ

Suddi Udaya

ಶಿಶಿಲ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಬಿಜೆಪಿ ಕಾರ್ಯಕರ್ತರಾದ ಚಂದ್ರಶೇಖರ್ ಗೌಡ ಧರ್ಮದಕಳ ಹಾಗೂ ಚೋಮರಿಗೆ ನುಡಿನಮನ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶಾಲಾ ಪ್ರವೇಶ ದ್ವಾರದ ಉದ್ಘಾಟನೆ

Suddi Udaya

ಪಡಂಗಡಿ ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya

11ನೇ ಶತಮಾನ ಕ್ರಿ.ಶ. 1260 ರಲ್ಲಿ ನಿರ್ಮಾಣವಾದ ಕ್ಷೇತ್ರ: ಮೇ 3ರಿಂದ ನಾರಾವಿ ಬಸದಿಯ ಧಾಮ ಸಂಪ್ರೋಕ್ಷಣೆ

Suddi Udaya
error: Content is protected !!