September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್.ಡಿ.ಎಂ ಐಟಿ ಕಾಲೇಜು : ವಿವೇಕ ಜಾಗೃತ ವಿಶೇಷ ಉಪನ್ಯಾಸ ಕಾರ್ಯಕ್ರಮ

ಉಜಿರೆ: ಜೀವ ಸಂಕುಲಗಳಲ್ಲಿ ಮಾನವ ಭಿನ್ನ ಮತ್ತು ವಿಶೇಷ. ಆದರೆ ಆತ‌ ಮನುಷ್ಯತ್ವ ಮತ್ತು ಸಹಬಾಳ್ವೆಯಿಂದ ಬಾಳಬೇಕು. ನಕಾರಾತ್ಮಕ ಚಿಂತನೆಗಳು ನಮ್ಮ ಸಮಯ ಮತ್ತು ಬುದ್ಧಿಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಸಕಾರಾತ್ಮಕ ಚಿಂತನೆಗಳು ನಮ್ಮ ಮನೋಬಲವನ್ನು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಬ್ರೆಜಿಲ್ ದೇಶದ ರಿಯೋ ದೆ ಜನೈರೋದಲ್ಲಿರುವ ರಾಮಕೃಷ್ಣ ವೇದಾಂತ ಆಶ್ರಮದ ಮುಖ್ಯಸ್ಥ ಸ್ವಾಮಿ ಆತ್ಮಜ್ಞಾನಂದ ಜೀ ಅಭಿಪ್ರಾಯಪಟ್ಟರು.

ಇವರು ಮಂಗಳೂರಿನ ರಾಮ ಕೃಷ್ಣ ಮಿಷನ್ ಸಹಭಾಗಿತ್ವದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ವಿವೇಕ ಜಾಗೃತ ಸರಣಿ ಉಪನ್ಯಾಸ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ, ‘ ಮೈಂಡ್ ಇಂಜಿನಿಯರಿಂಗ್ – ಡಿಸೈನಿಂಗ್ ದ ಇನ್ನರ್ ಸಾಫ್ಟ್ವೇರ್ ಫಾರ್ ಸಕ್ಸಸ್ ‘ ಎಂಬ ವಿಚಾರದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಜೀವನದಲ್ಲಿ ವ್ಯಕ್ತಿ ಗೌರವ ಮತ್ತು ವೃತ್ತಿ ಗೌರವದ ಭಾವನೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಸರಿ – ತಪ್ಪಿನ ಅಂತರವನ್ನು ಮನಗಾಣುವ ಯೋಚಾನ ಶಕ್ತಿಯನ್ನು ರೂಢಿಸಿಕೊಳ್ಳುವುದರ ಜೊತೆಗೆ ಸ್ವಂತ ಚಿಂತನೆ ಮತ್ತು ಪ್ರಯತ್ನಗಳಿಂದ ಯಶಸ್ಸಿನ ಮಾರ್ಗದೆಡೆಗೆ ಸಾಗಬೇಕು. ಆಗ ಸ್ವಾಮಿ ವಿವೇಕಾನಂದರ ಚಿಂತನೆಯಂತೆ ಸಮಾಜ ಮತ್ತು ದೇಶ ಸದೃಢವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಮಾರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಬೌದ್ಧಿಕ ಕ್ಷಮತೆಯನ್ನು ವಿಸ್ತರಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ಬ್ರೆಜಿಲ್ ದೇಶದ ರಿಯೋ ದೆ ಜನೈರೋದಲ್ಲಿರುವ ರಾಮಕೃಷ್ಣ ವೇದಾಂತ ಆಶ್ರಮದ ಮುಖ್ಯಸ್ಥ ಸ್ವಾಮಿ ಆತ್ಮಜ್ಞಾನಂದ ಜೀರವರನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವತಿಯಿಂದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮತ್ತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿರುವ ಡಾ. ಸತೀಶ್ಚಂದ್ರ ಎಸ್ ಶಾಲು ಹೊದಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಪದವಿ ಪೂರ್ವ ವಸತಿ ಕಾಲೇಜಿನ ಪ್ರಾಂಶುಪಾಲ ಸುನೀಲ್ ಪಂಡಿತ್ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಹಾಗು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅಪೇಕ್ಷಾ ಜೈನ್ ನಿರೂಪಿಸಿ, ವೇದಿಕೆಯಲ್ಲಿ ಉಪಸ್ಥಿತರಿದ್ದ ಎಸ್.ಡಿ.ಎಂ ಐಟಿ ಕಾಲೇಜಿನ ಎನ್.ಎಸ್.ಎಸ್ ಸಂಯೋಜಕ ಮಹೇಶ್ ಪಾಟೀಲ್ ವಂದಿಸಿದರು.

ಮೌಲ್ಯಯುತ ಜೀವನ ಶಿಕ್ಷಣ; ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉದ್ದೇಶ:
ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದಲ್ಲಿ ನಡೆಯುತ್ತಿರುವ ಎಲ್ಲಾ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉದ್ದೇಶ ಮತ್ತು ಆಶಯ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣದ ಜೊತೆಗೆ ಜೀವನ ಶಿಕ್ಷಣವನ್ನು ಕಲ್ಪಿಸಿಕೊಡುವುದು. ಈ ಮೂಲಕ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ,ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢವಾಗುತ್ತಾರೆ. ವೈಚಾರಿಕ ಚಿಂತನೆಗಳನ್ನು ಬೆಳೆಸಿಕೊಂಡು ಸಾಮಾಜ ಜೀವಿ ಮತ್ತು ದೇಶದ ಉತ್ತಮ ನಾಗರಿಕರಾಗಿ ಹೊರ ಹೊಮ್ಮುತ್ತಾರೆ. ಈ ದೃಷ್ಟಿಯಲ್ಲಿ ವಿವೇಕ ಜಾಗೃತಿಯಂತ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ.
– ಡಾ.ಸತೀಶ್ಚಂದ್ರ ಎಸ್.
ಮಾನ್ಯ ಕಾರ್ಯದರ್ಶಿಗಳು, ಎಸ್.ಡಿ.ಎಂ ಶಿಕ್ಷಣ ಸಂಸ್ಥೆ

Related posts

ಧರ್ಮಸ್ಥಳ ಲಕ್ಷದೀಪೋತ್ಸವ: ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ತ್ರಿವೇಣಿ ಸಂಗಮ

Suddi Udaya

ಉರ್ಬಂದಗುಡ್ಡೆ ಫ್ರೆಂಡ್ಸ್ ಮರೋಡಿ ಬಳಗದವರಿಂದ ಪೆರಾಡಿ-ಮರೋಡಿ ಸಂಪರ್ಕ ರಸ್ತೆ ದುರಸ್ತಿ

Suddi Udaya

ಪಶ್ಚಿಮ ಘಟ್ಟದ ಜನರ ಬದುಕಿನ ಜೊತೆ ಚೆಲ್ಲಾಟ ಬೇಡ: ಕೇಂದ್ರ ಸರ್ಕಾರ ESA ಕರಡು ಅಧಿಸೂಚನೆಯನ್ನು ಹಿಂಪಡೆಯಲಿ : ಕಸ್ತೂರಿರಂಗನ್ ವರದಿ ಜಾರಿಗೆ ತೀವ್ರ ವಿರೋಧ: ರಕ್ಷಿತ್ ಶಿವರಾಂ

Suddi Udaya

ಉಜಿರೆ ರಬ್ಬರ್ ಸೊಸೈಟಿಗೆ ಅಪೋಲೋ ಗೋಲ್ಡ್ ಪಾರ್ಟ್ನರ್ ಅವಾರ್ಡ್

Suddi Udaya

ಆರಂಬೋಡಿ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳರೋಗ ತಪಾಸಣಾ ಶಿಬಿರ

Suddi Udaya
error: Content is protected !!