ಬಳ್ಳಮಂಜ: “ಬಳ್ಳೊಡು ಮಂಜಲ್” ಎಂಬ ನಾಣ್ಣುಡಿಯಂತೆ ಬಳ್ಳದಲ್ಲಿ ಉದ್ಭವಿಸಿದ ಅನಂತದೇವರ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಬಳ್ಳಮಂಜ ಶ್ರೀ ಮಹತೋಭಾರ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಾಸ್ತು ಶಾಸ್ತçರೀತ್ಯಾ ಪುನರ್ನಿರ್ಮಿಸಿದ ನೂತನ ಧ್ವಜಸ್ಥಂಭ, ನೂತನ ಬ್ರಹ್ಮರಥ ಸಹಿತ ಈಶ್ವರ ದೇವರ ನೂತನ ಶಿಲಾಮಯ ಮಂಟಪ ಗರ್ಭಗೃಹದ ಸಮರ್ಪಣಾ ಪೂರ್ವಕ ಶ್ರೀ ಈಶ್ವರ ದೇವರ ಲಿಂಗ ಪುನಃಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ನೂತನ ಬ್ರಹ್ಮರಥದಲ್ಲಿ ಪ್ರಥಮ ಬ್ರಹ್ಮರಥೋತ್ಸವವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ದೇರೆಬೈಲು ಡಾ| ಶಿವಪ್ರಸಾದ ತಂತ್ರಿವರೇಣ್ಯರ ನೇತೃತ್ವದಲ್ಲಿ ವೇದಾಗಮಜ್ಞರಾದ ವೈದಿಕೋತ್ತಮರ ಸಹಯೋಗದೊಂದಿಗೆ ಮಾ.29 ರಿಂದ ಎ.6 ರವರೆಗೆ ನೆರವೇರಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮತನಾಡಿದರು.

ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರ ಡಾ.ಯಂ. ಹರ್ಷ ಸಂಪಿಗೆತ್ತಾಯ ಮಾತನಾಡಿ ಬ್ರಹ್ಮಕಲಶೋತ್ಸವದ ಕೆಲಸ ಕಾರ್ಯಗಳು ಭಕ್ತರು ಶ್ರಮದಾನ ಮೂಲಕ ನಡೆಸುತ್ತಿದ್ದಾರೆ. ಧಾರ್ಮಿಕ ವಿಧಿ ವಿಧಾನಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಶಾಸಕ ಹರೀಶ್ ಪೂಂಜರ 10 ಲಕ್ಷ ರೂ. ಅನುದಾನದಿಂದ ದೇವಾಲಯದ ಪಶ್ಚಿಮ ಭಾಗದಲ್ಲಿ ಶೀಟ್ ಅಳವಡಿಕೆ ನಡೆಸಲಾಗುತ್ತಿದೆ ಎಂದು ನುಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಸಂತ ಗೌಡ ಮರಕ್ಕಡ ಮಾತನಾಡಿ ನಾಡಿನ ಪ್ರಸಿದ್ಧ ನಾಗ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ ಕಳೆಕಟ್ಟಿದೆ. ಈಗಾಗಲೇ ಜೀರ್ಣೋದ್ದಾರ ಕಾರ್ಯಗಳು ಮುಕ್ತಾಯದ ಹಂತದಲ್ಲಿದೆ. ಬ್ರಹ್ಮಕಲಶೋತ್ಸವಕ್ಕೆ 50 ಸಾವಿರ ಜನ ಸೇರುವ ನಿರೀಕ್ಷೆಯಿದೆ. ನಾಳೆ ಮಡಂತ್ಯಾರಿನಿಂದ ತಣ್ಣೀರುಪಂತ ತನಕ ರಸ್ತೆ ಬದಿ ಸ್ವಚ್ಛತೆ ನಡೆಸಲಾಗುವುದು. ಸ್ವಚ್ಛತಾ ಕಾರ್ಯದಲ್ಲಿ ಸಾವಿರಕ್ಕೂ ಮಿಕ್ಕಿ ಭಕ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ದೇರೆಬೈಲು ಡಾ| ಶಿವಪ್ರಸಾದ ಅವರು ವೈದಿಕ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸುಧೀರ್ ಕುಮಾರ್ ಶೆಟ್ಟಿ ಕೊರೊಟ್ಟು, ಅರ್ಚಕ ಲಕ್ಷ್ಮೀಶ ಶಗ್ರಿತ್ತಾಯ, ಡಾ. ಪಿ. ಅನಂತಕೃಷ್ಣ ಭಟ್ ಮಂಗಳೂರು, ಚಂದ್ರಕಾಂತ್ ನಿಡ್ಡಾಜೆ, ಹೊನ್ನಪ್ಪ ಕುಮಾಲ್ ಮಾಣೂರು, ಅವಿನಾಶ್ ಕುಲಾಲ್ ಮಾಣೂರು, ಗೋಪಾಲ ಪೂಜಾರಿ ಕೊಲಾಜೆ, ಪ್ರಶಾಂತ್ ಶೆಟ್ಟಿ ಮೂಡಯೂರು, ತುಳಸಿದಾಸ್ ಪೈ. ಅಶೋಕ್ ಗುಂಡಿಯಲ್ಕೆ ಸಹಿತ ಮುತ್ತಿತರರು ಉಪಸ್ಥಿತರಿದ್ದರು.












