ಬೆಳ್ತಂಗಡಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳ್ತಂಗಡಿ ತಾಲೂಕು ಘಟಕದ 2026-2031ರ ಅವಧಿಗೆ ಎಲ್ಲಾ 8 ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕು ಘಟಕದ 8 ಸ್ಥಾನಗಳಿಗೆ ಒಟ್ಟು 16 ಮಂದಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಏ.14ರಂದು 8 ಮಂದಿ ತಮ್ಮ ನಾಮಪತ್ರ ಹಿಂಪಡೆದುಕೊಂಡ ಪರಿಣಾಮ 8 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಮುಗುಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ವಸತಿ ಶಾಲೆಯ ಲಕ್ಷ್ಮೀಕಾಂತ್ ಬೇಕಲ್ ಎಸ್, ಬದನಾಜೆ ಸ.ಹಿ.ಪ್ರಾ.ಶಾಲೆಯ ನಿರಂಜನ್, ಪೆರಿಂಜೆ ಸ.ಹಿ.ಪಾ.ಶಾಲೆಯ ರಾಜೇಶ್ ಎನ್, ಕಿಲ್ಲೂರು ಸ.ಹಿ.ಪ್ರಾ, ಶಾಲೆಯ ರಮೇಶ್ ಎಂ, ಉಜಿರೆ ಹಳೆಪೇಟೆ ಸ.ಹಿ.ಪ್ರಾ. ಶಾಲೆಯ ಸುರೇಶ್, ಮಹಿಳಾ ಮೀಸಲು ಸ್ಥಾನದಿಂದ ನಿಟ್ಟಡೆ ಸ.ಹಿ.ಪ್ರಾ.ಶಾಲೆಯ ಆರತಿ ಕುಮಾರಿ, ಉಣ್ಣಾಲು ಸ.ಕಿ.ಪ್ರಾ. ಶಾಲೆಯ ಗಂಗಾರಾಣಿ ನಾ.ಜೋಶಿ ಮತ್ತು ಸುಳ್ಳೋಡಿ ಸ.ಕಿ.ಪ್ರಾ.ಶಾಲೆಯ ಸೌಮ್ಯ ಎಂ. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಡಗಕಾರಂದೂರು ಸ.ಹಿ.ಪ್ರಾ.ಶಾಲೆಯ ಮಂಗಳ ಕೆ, ಬೆಳ್ತಂಗಡಿ ಪಿಎಂಶ್ರೀ ಶಾಲೆಯ ಮಹಮ್ಮದ್ ಶರೀಫ್ ಕೆ.ಪಿ, ಕುದ್ರಡ್ಕ ಸ.ಕಿ.ಪ್ರಾ. ಶಾಲೆಯ ಚೇತನ್ ಕುಮಾರ್, ಪುಂಜಾಲಕಟ್ಟೆ ಕೆ.ಪಿ.ಎಸ್. ಶಾಲೆಯ ಅನಿತಾ, ಬೆಳ್ತಂಗಡಿ ಪಿಎಂಶ್ರೀ ಶಾಲೆಯ ಸೀತಾರಾಮ, ಕಳೆಂಜ ಸ.ಹಿ.ಪ್ರಾ.ಶಾಲೆಯ ಕೃಷ್ಣಪ್ಪ ಟಿ, ಬಸನ ಗೌಡ ಎಸ್ ಮತ್ತು ಕಾರಿಂಜ ಸ.ಕಿ.ಪ್ರಾ.ಶಾಲೆಯ ಪರಮೇಶ್ವರ ಎಸ್. ಅವರು ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ನಿವೃತ್ತ ಪ್ರಥಮ ದರ್ಜೆ ಸಹಾಯಕ ನಾರಾಯಣ ನಾಯ್ಕ ಮುಖ್ಯ ಚುನಾವಣಾಧಿಕಾರಿಯಾಗಿ ಹಾಗೂ ನಿವೃತ್ತ ದೈಹಿಕ ಶಿಕ್ಷಕ ಪಂಚಾಕ್ಷರಪ್ಪ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.












