ಬೆಳ್ತಂಗಡಿ: ತಾಲೂಕಿನ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಬಾರ್ಡ್ ಜಲಾನಯನ ಅಭಿವೃದ್ಧಿ ನಿಧಿ ಅಡಿಯಲ್ಲಿ ಪೆರ್ನೇಲೆ ಸ್ಪ್ರಿಂಗ್ ಶೆಡ್ ಯೋಜನೆಯ ಉದ್ಘಾಟನೆ ಹಾಗೂ ಪೆರ್ನೇಲೆ ಕೆರೆ ಅಭಿವೃದ್ಧಿಗೆ ಶಿಲಾನ್ಯಾಸ ಕಾರ್ಯಕ್ರಮ ಎ.18 ರಂದು ತೋಟತ್ತಾಡಿ ಗ್ರಾಮದ ಪೆರ್ನೇಲೆ ಕೆರೆ ಆವರಣದಲ್ಲಿ ನಡೆಯಿತು.
ಶಾಸಕ ಹರೀಶ್ ಪೂಂಜ ಸ್ಪ್ರಿಂಗ್ ಶೆಡ್ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿ ಈ ಕೆರೆ ಅಭಿವೃದ್ಧಿಯಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಸಮೃದ್ಧಿಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟ ಅವರು ಕೆರೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಮಾಡುವ ಮೂಲಕ ಶಿಲಾನ್ಯಾಸ ನೇರವೇರಿಸಿದರು.

ತೋಟತ್ತಾಡಿ ಗ್ರಾಮದ 27.47ಎಕರೆ ಪ್ರದೇಶದಲ್ಲಿರುವ ಪೆರ್ನಾಳೆ ಕೆರೆ ೩೦೦ಕ್ಕೂ ಅಧಿಕ ಕುಟುಂಬಗಳ ಕೃಷಿಗೆ ಜೀವಾಳವಾಗಿದೆ. ಪುರಾತನ ಕಾಲದ ಈ ಕೆರೆ ಅಭಿವೃದ್ಧಿಗೊಳ್ಳುವುದರಿಂದ ಇನ್ನಷ್ಟು ಕುಟುಂಬಗಳಿಗೆ ಅನುಕೂಲವಾಗುವುದರ ಜತೆಗೆ ಹೆಚ್ಚಿನ ಸಮಯ ನೀರು ಹರಿದು ಬರಲಿದೆ. ಈ ಕೆರೆಯ ಅಭಿವೃದ್ಧಿಗೆ ಪಂಚಾಯಿತಿ ೩ ವರ್ಷಗಳ ಹಿಂದೆ ನಬಾರ್ಡ್ಗೆ ಮನವಿ ಸಲ್ಲಿಸಿತು. ನಬಾರ್ಡ್ ಅಧಿಕಾರಿಗಳ ತಂಡ ಇಲ್ಲಿಗೆ ಆಗಮಿಸಿ ಅಧ್ಯಯನ ನಡೆಸಿ ಕೆರೆ ಅಭಿವೃದ್ಧಿಯಿಂದ ೩೫೦ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಅನುಕೂಲವಾಗಲಿದೆ ಎಂಬುದನ್ನು ಮನಗಂಡು ಈ ಯೋಜನೆ ಕೈಗೆತ್ತಿಕೊಂಡಿದೆ. ಗ್ರಾಮಸ್ಥರ ಸಭೆ ಕರೆದು ಸಮಿತಿ ರಚಿಸಿ ಊರಿನವರಿಂದಲೂ ಒಪ್ಪಿಗೆ ಪಡೆಯ ಲಾಗಿದೆ. ಈ ಕುರಿತು ಸುದ್ದಿ ಉದಯ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.
ಕೆರೆ ಅಭಿವೃದ್ಧಿಗೆ ಶಾಸಕ ಹರೀಶ್ ಪೂಂಜರು ಶಾಸಕ ನಿಧಿಯಿಂದ 5 ಲಕ್ಷ ರೂ..ಅನುದಾನ ಒದಗಿಸಿದ ಶಾಸಕರಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು. ಜಲಾನಯನ ಅಭಿವೃದ್ಧಿ ನಿಧಿಯಿಂದ 16 ಲಕ್ಷ ರೂ.ಅನುದಾನ ಒದಗಿಸಲಾಗಿದ್ದು ಅಭಿವೃದ್ಧಿ ಕಾಮಗಾರಿ ವೇಗ ಪಡೆಯಲಿದೆ. 90 ಲಕ್ಷ ರೂ. ವೆಚ್ಚದ ಯೋಜನೆ ಇದಾಗಿದೆ.

ಜಿಲ್ಲಾ ನಬಾರ್ಡ್ ಎಜಿಎಂ(ಡಿಡಿ) ಸಂಗೀತಾ ಎಸ್.ಕರ್ತಾ ಅಧ್ಯಕ್ಷತೆ ವಹಿಸಿದ್ದರು. ಸಿಆರ್ಡಿ ಸಂಸ್ಥೆಯ ನಿರ್ದೇಶಕ ಶಾಜಿ, ಸಂಯೋಜಕ ನಾರಾಯಣ, ಪ್ರತಿನಿಧಿ ರಾಜೇಶ್, ಪೆನೇಲೆ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸಾದ್ ಕೆ.ವಿ., ನವೀನ್ ನೆರಿಯ, ತಾ.ಪಂ.ಮಾಜಿ ಸದಸ್ಯ ಕೊರಗಪ್ಪ ಗೌಡ, ಗ್ರಾ.ಪಂ.ಮಾಜಿ ಸದಸ್ಯ ಅವಿನಾಶ್ ಹಾಗೂ ಗುತ್ತಿಗೆದಾರ ಪ್ರಜೀತ್ ಉಪಸ್ಥಿತರಿದ್ದರು. ಒಬ್ಬಯ್ಯ ಸ್ವಾಗತಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ವಂದಿಸಿ, ನಿರೂಪಿಸಿದರು. ಕೆರೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.












