ಪುಂಜಾಲಕಟ್ಟೆ: ಲಕ್ಷಾಂತರ ರೂ. ಮೌಲ್ಯದ ಖೋಟಾನೋಟುಗಳನ್ನು ಸಂಗ್ರಹಿಸಿದ್ದ ಆರೋಪದಲ್ಲಿ ದಾಖಲಾಗಿರುವ ಎಫ್ ಐಆರ್ ರದ್ದು ಕೋರಿ ಆರೋಪಿಯೊಬ್ಬ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಬಂಟ್ವಾಳ ತಾಲೂಕಿನ ಕೂಮಿನಡ್ಕ ನಿವಾಸಿ ಅಬ್ದುಲ್ ರಶೀದ್ ಮೊಹಮದ್ ಅಲಿ ಎಂಬಾತ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಪ್ರಕರಣದಲ್ಲಿ ಆರೋಪಿಗಳು 2.38 ಲಕ್ಷ ರೂ. ಮೌಲ್ಯದ ಖೋಟಾನೋಟು ಸಂಗ್ರಹಿಸಿರುವುದರಿಂದ ಸರಕಾರದ ಪರ ರಾಜ್ಯ ಸರಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರೇ ಹಾಜರಾಗಬೇಕು ಎಂದು ಸೂಚಿಸಿದ ನ್ಯಾಯಪೀಠ, ಪುಂಜಾಲಕಟ್ಟೆ ಠಾಣಾ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಪೊಲೀಸ್ ಅಧಿಕಾರಿ ಕೆ.ವಿ.ರಾಜೇಶ್ 2026ರ ಮೇ 1ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಹಮದ್ ಸಮೀರ್, ಮಹಮ್ಮದ್ ಇರ್ಫಾನ್, ರಶೀದ್ ಕೂಮಿನಡ್ಕ ಮತ್ತಿತರರು 2026ರ ಮೇ 1ರಂದು ಕಾರಿನಲ್ಲಿ 500 ರೂ. ಮುಖಬೆಲೆಯ ಒಟ್ಟು ಲಕ್ಷ ರೂ. ಮೌಲ್ಯದ 2.38 ಖೋಟಾನೋಟುಗಳನ್ನು ಸಂಗ್ರಹಿಸಿರುವ ಬಗ್ಗೆ ಮಾಹಿತಿ ಬಂದಿತ್ತು. ಆ ಮಾಹಿತಿ ಮೇರೆಗೆ ದಾಳಿ ನಡೆಸಿ, ಆರೋಪಿಗಳ ವಶದಲ್ಲಿದ್ದ, ಮೊಬೈಲ್, 57 ಸಾವಿರ ರೂ. ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದೂರು ನೀಡಿದ್ದರು.
ಭಾರತೀಯ ನ್ಯಾಯ ಸಂಹಿತೆ(ಬಿಎನ್ ಎಸ್) ಸೆಕ್ಷನ್ 179 ಮತ್ತು 180ರಡಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಪ್ರಕರಣ ಬಂಟ್ವಾಳದ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಇದರಿಂದ ಎಫ್ ಐಆರ್ ರದ್ದು ಕೋರಿ ರಶೀದ್ ಅರ್ಜಿ ಸಲ್ಲಿಸಿದ್ದರು.












