July 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಸವಣಾಲುವಿನ ಹಿತ್ತಿಲಪೇಲ ನಿವಾಸಿಗಳು; ಸಂಪರ್ಕ ಕೊಂಡಿಯಾಗಿರುವ ನದಿಯನ್ನೇ ದಾಟದಂತೆ ಬ್ಯಾನರ್ ಹಾಕುವ ಮೂಲಕ ಅಧಿಕಾರಿಗಳ ದಿಗ್ಬಂಧನ

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು ಗ್ರಾಮದ ಹಿತ್ತಿಲಪೇಲ ಎಂಬಲ್ಲಿ ಕಳೆದ ವರ್ಷ ಜೂನ್ 15 ರಂದು ದ್ವಿಚಕ್ರ ವಾಹನದ ಮೂಲಕ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋದ ಪ್ರದೇಶದಲ್ಲಿ ನದಿ ತುಂಬಿ ಹರಿಯುತ್ತಿದ್ದು ನದಿ ದಾಟುವುದು ನಿಷೇಧಿಸಲಾಗಿದೆ ಎಂಬ ಬ್ಯಾನರ್ ಹಾಕುವ ಮೂಲಕ ಮೂಲನಿವಾಸಿಗಳಿಗೆ ದಿಗ್ಬಂಧನ ವಿಧಿಸುವ ಕಾರ್ಯವನ್ನು ಇಲಾಖೆಗಳು ಮಾಡಿದೆ.

ಸವಣಾಲು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿತ್ತಿಲಪೇಲ ಎಂಬಲ್ಲಿ 9 ಆದಿವಾಸಿ ಮಲೆಕುಡಿಯ ಕುಟುಂಬಗಳು ಎರಡು ಶತಮಾನಗಳಿಂದ ವಾಸಿಸುತ್ತಿವೆ‌. ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಜೀವಿಸುತ್ತಿರುವ ಕುಟುಂಬಗಳು ವಿದ್ಯುತ್ , ರಸ್ತೆ , ಸೇತುವೆ ಮುಂತಾದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸ್ವಾತಂತ್ರ್ಯ ಲಭಿಸಿ 79 ವರ್ಷಗಳಾದರೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲವಾದ ಆಡಳಿತ ವ್ಯವಸ್ಥೆ ಇದೀಗ ಸಂಪರ್ಕ ಕೊಂಡಿಯಾಗಿರುವ ಇಲ್ಲಿ ನದಿಯನ್ನೇ ದಾಟಬಾರದು ಎಂದು ಬ್ಯಾನರ್ ಅಳವಡಿಸುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತಗನವನ್ನು ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆ ಮಾಡಿದೆ.

ಕಳೆದ ವರ್ಷ ಯುವಕರು ನದಿ ನೀರಿನ ರಭಸಕ್ಕೆ ದ್ವಿಚಕ್ರ ಸಮೇತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಅದೃಷ್ಟವಶಾತ್ ಬದುಕಿ ಬಂದಿದ್ದರು. ಆ ಸಂದರ್ಭದಲ್ಲಿ ತಾಲೂಕು , ಜಿಲ್ಲಾ ಆಡಳಿತದ ಅಧಿಕಾರಿಗಳು ಸೇರಿದಂತೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಿತ್ತಿಲಪೇಲಕ್ಕೆ ಭೇಟಿ ನೀಡಿದ್ದರು. ಸ್ಥಳೀಯ ನಿವಾಸಿಗಳು ಅಧಿಕಾರಿಗಳ ಜನಪ್ರತಿನಿಧಿಗಳ ಮುಂದೆ ತಮಗೆ ಕನಿಷ್ಟ ಸಂಪರ್ಕಕ್ಕೆ ಒಂದು ಸೇತುವೆ ನಿರ್ಮಿಸಿಕೊಡಿ ಎಂಬ ಬೇಡಿಕೆ ಇಟ್ಟಿದ್ದರು. ಅತ್ಯಂತ ತುತ್ತಾಗಿ ಸೇತುವೆ ನಿರ್ಮಾಣ ಮಾಡುವ ಬಗ್ಗೆ ಎಲ್ಲರೂ ಭರವಸೆ ನೀಡಿದ್ದರು. ಆದರೆ ಇಲ್ಲಿಯ ತನಕವೂ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಕೆಲಸಗಳು ನಡೆದಿಲ್ಲ. ಅಧಿಕಾರಿಗಳು , ಜನಪ್ರತಿನಿಧಿಗಳು ನೀಡಿದ ಭರವಸೆಗಳು ಇಲ್ಲಿಯ ತನಕವೂ ಈಡೇರಿಲ್ಲ.
ಇದೀಗ ಭಾರೀ ಮಳೆಯಿಂದಾಗಿ ಇಲ್ಲಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಮೂಲನಿವಾಸಿಗಳು ಈ ನದಿಯನ್ನು ದಾಟಿಯೇ ಹೊರ ಪ್ರಪಂಚಕ್ಕೆ ಬರಬೇಕಾಗಿದೆ. ಕೂಲಿ ಕೆಲಸಕ್ಕೆ ಹೋಗಲು, ದಿನನಿತ್ಯದ ಅಗತ್ಯ ವಸ್ತಗಳನ್ನು ತರಲು ಇವರಿಗೆ ಇದೊಂದೇ ದಾರಿಯಗಿದೆ. ಸೇತುವೆ ನಿರ್ಮಿಸಲು ಮುಂದಾಗದ ಅಧಿಕಾರಿಗಳು ಇದೀಗ ನದಿ ದಾಟಬಾರದು ಎಂಬ ಬ್ಯಾನರ್ ಅಳವಡಿಸಿದ್ದಾರೆ.

“ಆದಿವಾಸಿ ಸಮುದಾಯವನ್ನು ಜನಪ್ರತಿನಿಧಿಗಳು ಕೇವಲ ಓಟ್ ಬ್ಯಾಂಕ್ ಆಗಿ ದುರುಪಯೋಗ ಮಾಡಿಕೊಂಡಿದೆ. ಆದಿವಾಸಿಗಳ ಯಾವುದೇ ಅಭಿವೃದ್ಧಿ ಅವರಿಗೆ ಬೇಕಾಗಿಲ್ಲ. ಅಧಿಕಾರಿಗಳು ನಮ್ಮ ಸಮುದಾಯಕ್ಕೆ ಸುಳ್ಳು ಭರವಸೆ ನೀಡಿ ಮೋಸ ಮಾಡುತ್ತಿದೆ. ಒಟ್ಟಾರೆಯಾಗಿ ಮಲೆಕುಡಿಯ ಸಮುದಾಯವನ್ನು ಗೊಂಬೆಯಾಟದಂತೆ ಬಳಸುತ್ತಿದ್ದಾರೆ. ನದಿ ದಾಟಬಾರದು ಎಂದು ಸೂಚನಾ ಫಲಕ ಹಾಕಿರುವ ಅಧಿಕಾರಿಗಳು ಈ ಆದಿವಾಸಿ ಕುಟುಂಬಗಳು ಹೇಗೆ ಬದುಕಬೇಕು ಎಂಬುದನ್ನು ಹೇಳಬೇಕಾಗಿದೆ ಅವರ ದಿನನಿತ್ಯದ ಅಗತ್ಯಗಳಿಗಾಗಿ ಸರಕಾರ ಯಾವ ಕ್ರಮ ಕೈಗೊಳ್ಳದೆ ಹೀಗೆ ದಿಗ್ಬಂಧನ ವಿಧಿಸುವುದು ಎಷ್ಟು ಸರಿ, ಇಂತಹ ಮೋಸದ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನೆ ನಡೆಸಬೇಕಾಗುತ್ತದೆ”
-ಜಯಾನಂದ ಪಿಲಿಕಲ , ಪ್ರಧಾನ ಕಾರ್ಯದರ್ಶಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ

Related posts

ಉಜಿರೆ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎನ್ ಎಸ್ ಎಸ್ ಮತ್ತು ಯುವ ರೆಡ್ ಕ್ರಾಸ್ ಘಟಕದ ಸಹಭಾಗಿತ್ವದಲ್ಲಿ ಪ್ರಶಿಕ್ಷಣ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ವರ್ತಕರ ಸಂಘದಿಂದ ದಯಾ ವಿಶೇಷ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಬೆಳ್ತಂಗಡಿ: ಜೀವನ್ ಜ್ಯೋತಿ ಸುರಕ್ಷಾದಿಂದ ಸಹಾಯಧನ ಹಸ್ತಾಂತರ

Suddi Udaya

ಲಿಫ್ಟ್‌ನಲ್ಲಿ ಸಿಲುಕಿ ಬೆಳಾಲಿನ ಯುವಕ ಸಾವು

Suddi Udaya

ಗುರುವಾಯನಕೆರೆ: ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಯಾಂತ್ರಿಕೃತ ಭತ್ತದ ಕೃಷಿ ನಾಟಿಗೆ ಸಸಿ ಮಡಿ ಹಸ್ತಾಂತರ

Suddi Udaya

ಎಲ್. ಸಿ. ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya
error: Content is protected !!