ಬೆಳ್ತಂಗಡಿ: ಭಕ್ತಿ, ಸಾಹಸ ಹಾಗೂ ಪ್ರಕೃತಿ ಪ್ರೇಮವನ್ನು ಒಂದೇ ಪ್ರವಾಸದಲ್ಲಿ ಬೆಸೆದು ಬೆಳ್ತಂಗಡಿಯ ಉದ್ಯಮಿ ರತೀಶ್ ರಾವ್ ಹಾಗೂ ಅವರ ಪತ್ನಿ ಪ್ರೀತಿ ರಾವ್ ದಂಪತಿ ಸುಮಾರು 15 ದಿನಗಳ ಅವಧಿಯಲ್ಲಿ 6,300 ಕಿಲೋಮೀಟರ್ಗಳನ್ನು ಸ್ವತಃ ಕಾರು ಚಾಲನೆ ಮಾಡಿಕೊಂಡು ಉತ್ತರಾಖಂಡದ ಪ್ರಸಿದ್ಧ ಚಾರ್ಧಾಮ ಸೇರಿದಂತೆ ಹಲವು ಪವಿತ್ರ ಕ್ಷೇತ್ರಗಳಿಗೆ ಯಶಸ್ವಿಯಾಗಿ ಯಾತ್ರೆ ಕೈಗೊಂಡಿದ್ದಾರೆ.

ಯಾತ್ರೆಯ ವೇಳೆ ದಂಪತಿ ಯಮುನೋತ್ರಿ,ಗಂಗೋತ್ರಿ, ಕೇದಾರನಾಥ್ ಹಾಗೂ ಬದರಿನಾಥ್ ಚಾರ್ಧಾಮ ಕ್ಷೇತ್ರಗಳ ದರ್ಶನ ಪಡೆದರು. ಅಲ್ಲದೆ, ಪಂಚಪ್ರಯಾಗ, ಗುಪ್ತಕಾಶಿ, ಉತ್ತರಕಾಶಿ ಹಾಗೂ ಶಿವ-ವಿಷ್ಣುಗಳ ಐಕ್ಯಕ್ಕೆ ಸಾಕ್ಷಿಯಾಗಿರುವ ಪವಿತ್ರ ತ್ರಿಯುಗಿನಾರಾಯಣ ದೇವಸ್ಥಾನಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕಷ್ಟಕರ ಪರ್ವತ ಮಾರ್ಗಗಳು, ತಿರುವು-ಮುರುವುಗಳಿಂದ ಕೂಡಿದ ಹಿಮಾಲಯದ ರಸ್ತೆಗಳಲ್ಲಿ ಯಾವುದೇ ಚಾಲಕರ ನೆರವಿಲ್ಲದೆ ಸ್ವತಃ ಕಾರು ಚಾಲನೆ ಮಾಡಿಕೊಂಡು ಯಾತ್ರೆಯನ್ನು ಪೂರ್ಣಗೊಳಿಸಿರುವುದು ವಿಶೇಷವಾಗಿದೆ.

ಸಾಹಸಮಯ ಪ್ರವಾಸಗಳು ಹಾಗೂ ಟ್ರೆಕ್ಕಿಂಗ್ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ರತೀಶ್ ರಾವ್ ಮತ್ತು ಪ್ರೀತಿ ರಾವ್ ದಂಪತಿ ಈ ಹಿಂದೆ ಕೂಡ ದೇಶದ ವಿವಿಧ ಭಾಗಗಳಿಗೆ ಸ್ವಯಂ ಚಾಲನೆಯ ಮೂಲಕ ಪ್ರವಾಸ ಕೈಗೊಂಡಿದ್ದು, ಪ್ರಕೃತಿಯ ಸೊಬಗು ಮತ್ತು ಆಧ್ಯಾತ್ಮಿಕ ಅನುಭವಗಳನ್ನು ಆಸ್ವಾದಿಸುವುದನ್ನು ತಮ್ಮ ಜೀವನಶೈಲಿಯ ಭಾಗವಾಗಿಸಿಕೊಂಡಿದ್ದಾರೆ.
ಭಕ್ತಿ, ಧೈರ್ಯ ಮತ್ತು ಸಾಹಸ ಮನೋಭಾವವನ್ನು ಪ್ರತಿಬಿಂಬಿಸುವ ಈ ಚಾರ್ಧಾಮ ಯಾತ್ರೆ ಬೆಳ್ತಂಗಡಿ ಭಾಗದ ಜನರ ಮೆಚ್ಚುಗೆಗೆ ಪಾತ್ರವಾಗಿದೆ.















