
ಮುಂಡಾಜೆ: ಗ್ರಾಮ ಸಭೆಯಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಚರ್ಚೆಗಳನ್ನು ನಡೆಸುವುದಕ್ಕೆ ಅಧಿಕಾರಿಗಳೇ ಬಾರದ ಕಾರಣ ಸಭೆಯನ್ನು ವಿರೋಧಿಸಿ ಸಭೆಯ ಮುಂದೆ ಧರಣಿ ಕುಳಿತು ಸಭೆಯನ್ನು ರದ್ದುಗೊಳಿಸಿದ ಘಟನೆ ಮುಂಡಾಜೆಯಲ್ಲಿ ನಡೆಯಿತು.

ಜು.31ರಂದು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ.ರವಿಕುಮಾರ್ ಬೆಳ್ತಂಗಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಮುಂಡಾಜೆ ಗ್ರಾಮ ಪಂಚಾಯತ್ 2026-27ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಇಲಾಖೆಯ ಹೆಚ್ಚಿನ ಅಧಿಕಾರಿಗಳು ಗೈರು ಆಗಿದ್ದು ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದ್ದ ರಸ್ತೆ ಸೇರಿದಂತೆ ಹಲವು ವಿಚಾರಗಳು ಈಡೇರದ ಕಾರಣ ಗ್ರಾಮಸ್ಥರು ಸಭೆಯ ಮುಂದೆ ಧರಣಿ ಕುಳಿತು ಘೋಷಣೆ ಕೂಗುವ ಮೂಲಕ ಸಭೆಗೆ ವಿರೋಧ ವ್ಯಕ್ತ ಪಡಿಸಿದರು. ಬಳಿಕ ಸಭೆಯನ್ನು ರದ್ದು ಗೊಳಿಸಿ ಮುಂದೂಡಲಾಯಿತು.

ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೀಯಾ ಆಗ್ನೇಸ್ ಅವರು ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ, ಇಲಾಖೆಯ ಅಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.












