ಬೆಳ್ತಂಗಡಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ದೈನಂದಿನ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆ ಉಜಿರೆ ಇದರ ಮಾಲೀಕರು, ಉದ್ಯಮಿಗಳು, ಬದುಕು ಕಟ್ಟೋಣ ಬನ್ನಿ ಸಂಚಾಲಕ ಕೆ ಮೋಹನ್ ಕುಮಾರ್ ಉದ್ಘಾಟಿಸಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂಸೇವಕರು ಯೋಧರ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸಬೇಕು. ಹಾಗಾಗಿ ಸ್ವಯಂಸೇವಕರನ್ನು ಯೋಧರನ್ನಾಗಿ ಮಾಡುವುದೇ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ. ಇಂದು ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡಬೇಕಾದರೆ ಯುವಜನತೆಯಾದ ನಾವು ಸಂಕಲ್ಪವನ್ನು ಮಾಡಿದರೆ ನಮ್ಮ ಭಾರತ ದೇಶ ವ್ಯಸನಮುಕ್ತ ಸಮಾಜ ವಾಗಿ ನಿರ್ಮಾಣವಾಗುತ್ತದೆ ಎಂದರು.
ಸಮಾಜದಲ್ಲಿ ಸಂಸ್ಕಾರಯುತ ಯುವಕರು ನಿರ್ಮಾಣವಾಗಬೇಕು. ಹಿಂದಿನ ಕಾಲದಲ್ಲಿ ನಾವು ನಮ್ಮ ಹಿರಿಯರ ಮಾರ್ಗದರ್ಶನ ಮತ್ತು ಸಂಸ್ಕಾರಯುತ ಜೀವನದಿಂದಾಗಿ ಈ ಮಟ್ಟಕ್ಕೆ ಬೆಳೆದಿದ್ದೇವೆ. ಆದುದರಿಂದ ನೀವೆಲ್ಲರೂ ನಿಮ್ಮ ಜೀವನದಲ್ಲಿ ಸಂಸ್ಕಾರಗಳನ್ನು ಬೆಳೆಸಿಕೊಂಡು ತಂದೆ ತಾಯಿಗಳಿಗೆ ಗುರುಗಳಿಗೆ ಗೌರವವನ್ನು ನೀಡಬೇಕು ಎಂದು ತಿಳಿಸಿದರು. ನಾವೆಲ್ಲರೂ ಸಮಾಜಮುಖಿ ಜೀವನವನ್ನು ನಡೆಸಿದಾಗ ಈ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಇಂದು ನನಗೆ ಚಿಕ್ಕ ಸಂಸ್ಕಾರದಿಂದಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮುಖಾಂತರ ಬಡ ಮಕ್ಕಳಿಗೆ ಶಿಕ್ಷಣ ಸಿಗಬೇಕೆಂದು ಆಶಯವನ್ನು ಹೊಂದಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಪದ್ಮನಾಭ ಕೆ. ವಹಿಸಿದ್ದರು. ಇವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಯುವಕರಿಗೆ ಸಂಸ್ಕಾರ ನೀಡುವ ಕೇಂದ್ರ ಎಂದು ತಿಳಿಸಿದರು. ಎನ್ಎಸ್ಎಸ್ ಘಟಕ ಒಂದರ ಯೋಜನಾಧಿಕಾರಿ ಡಾ. ಸುಮನ್ ಶೆಟ್ಟಿ ಎನ್ ಇವರು ಕಳೆದ ವರ್ಷ ಎನ್ ಡಿ ಆರ್ ಎಫ್ ತರಬೇತಿ ಪಡೆದ ವಿದ್ಯಾರ್ಥಿಗಳ ಪ್ರಮಾಣ ಪತ್ರಗಳನ್ನು ವಿತರಿಸಿದರು ಹಾಗೂ ಘಟಕ ಎರಡರ ಯೋಜನಾಧಿಕಾರಿ ಡಾ. ಕುಶಾಲಪ್ಪ ಎಸ್ ಉದ್ಘಾಟಕರ ಪರಿಚಯವನ್ನು ಮಾಡಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿ ನಾಯಕರಾದ ರಕ್ಷಿತ್, ಶ್ರವಣ್, ಶಿಲ್ಪ, ಪ್ರತಿಜ್ಞ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಅನನ್ಯ ಮಾಡಿದರು. ರಾಷ್ಟ್ರೀಯ ಸೇವಾ ಯೋಜನೆ ಗೀತೆಯನ್ನು ತೇಜಾಕ್ಷಿ ಮತ್ತು ತಂಡ ಹಾಡಿದರು.
ಜಯಶ್ರೀ ಅತಿಥಿಗಳನ್ನು ಸ್ವಾಗತಿಸಿ, ಶಿವರಾಜ್ ವಂದನಾರ್ಪಣೆಗೈದರು .













