ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯುವ ರೆಡ್ ಕ್ರಾಸ್ ಘಟಕ, ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಸಮಿತಿ, ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಆನ್ಸ್ ಕ್ಲಬ್ ಬೆಳ್ತಂಗಡಿ ಸಹಭಾಗಿತ್ವದಲ್ಲಿ ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯ ಮಾಹಿತಿ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿಯ ಶ್ರೀ ದುರ್ಗಾ ಕ್ಲಿನಿಕ್ ಸ್ತ್ರೀ ರೋಗ ತಜ್ಞೆ ಡಾ. ವಿನಯ ಕಿಶೋರ್ ಮಾತನಾಡಿ, ಸಮಾಜದಲ್ಲಿ ಹೆಣ್ಣಿನ ಪಾತ್ರ ಮಹತ್ತರವಾದದ್ದು, ತನ್ನ ಬದುಕಿನುದ್ದಕ್ಕೂ ಹಲವು ಆಯಾಮಗಳಲ್ಲಿ ಪಾತ್ರ ನಿರ್ವಹಿಸುತ್ತಾಳೆ. ಹಾಗಾಗಿ ವಿದ್ಯಾರ್ಥಿನಿಯರು ಪ್ರೌಢಾವಸ್ಥೆಯಿಂದಲೇ ತಮ್ಮ ದೇಹದ ವಾಸ್ತವಿಕ ಸಂಗತಿಗಳನ್ನು ಅರಿತುಕೊಳ್ಳಬೇಕು. ಪಕೃತಿಯ ನಿಯಮದಂತೆ ನಾವು ಮುಂದೆ ಸಾಗಬೇಕು. ದೇಹದಲ್ಲಾಗುವ ಸಣ್ಣ ಸಣ್ಣ ಬದಲಾವಣೆಗಳ ಗೊಂದಲವನ್ನು ಪೋಷಕರು ಹಾಗೂ ಹಿರಿಯರಿಂದ ಪರಿಹರಿಸಿಕೊಂಡು ಬೆಳವಣಿಗೆಯ ಹಂತದಿಂದಲೇ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯ.
ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರಲ್ಲಿ ಗರ್ಭಕೋಶದ ಹಾಗೂ ಗರ್ಭಕಂಠದ ಕ್ಯಾನ್ಸರ್ ಗಳು ಹೆಚ್ಚುತ್ತಿವೆ. ಇದರ ಮುಂಜಾಗೃತೆಗಾಗಿ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕು. ಆರೋಗ್ಯದ ಸುಸ್ಥಿರತೆಗೆ ನಾವು ಪ್ರಾಮುಖ್ಯತೆ ನೀಡಬೇಕು ಎಂದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿದ ಪಾಲಿಟೆಕ್ನಿಕ್ ವಿದ್ಯಾರ್ಥಿನಿಯರು ಕೇಳಿದ ಹಲವು ಪ್ರಶ್ನೆ ಮತ್ತು ಸಂಶಯಗಳಿಗೆ ಡಾ. ವಿನಯ ಕಿಶೋರ್ ಉತ್ತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಸಮಿತಿ ಅಧ್ಯಕ್ಷೆ ಮೇರಿ ಸ್ಮಿತಾ ವಹಿಸಿದ್ದರು. ವೇದಿಕೆಯಲ್ಲಿ ಆನ್ಸ್ ಕ್ಲಬ್ ನ ಅಧ್ಯಕ್ಷೆ ರಾಜಶ್ರೀ ರಾವ್, ಕಾರ್ಯದರ್ಶಿ ಅಪರ್ಣಾ ಹಾಗೂ ಎನ್ ಎಸ್.ಎಸ್.ನ ಉಪಯೋಜನಾಧಿಕಾರಿ ರೆನಿಟಾ ಮತ್ತು ಯುವ ರೆಡ್ ಕ್ರಾಸ್ ಘಟಕದ ಸದಸ್ಯೆ ಶಶಿಕಲಾ ಉಪಸ್ಥಿತರಿದ್ದರು. ಕಾಲೇಜಿನ ಎಲ್ಲಾ ಮಹಿಳಾ ಸಿಬ್ಬಂಧಿಗಳು ಮತ್ತು ವಿದ್ಯಾರ್ಥಿನಿಯರು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸಿಂಚನ ಸ್ವಾಗತಿಸಿ, ವರ್ಷಾ ಕೆ ಪಿ ನಿರೂಪಿಸಿದರು. ಅಮೂಲ್ಯ ಶೆಟ್ಟಿ ವಂದಿಸಿದರು.











