ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನಲ್ಲಿ “ಚಾರಿತ್ರ್ಯವೇ ಯಶಸ್ಸಿನ ಮೊದಲ ಹೆಜ್ಜೆ” ವಿವೇಕ ಜಾಗೃತಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಆಂಧ್ರಪ್ರದೇಶದ ಕಡಪದಲ್ಲಿರುವ ರಾಮಕೃಷ್ಣ ವಿಷನಿನ ಸ್ವಾಮಿ ಅನುಪಮಾನಂದಜಿ ವಿದ್ಯಾರ್ಥಿಗಳನ್ನು ಉದ್ದೇಶಿ ಮಾತನಾಡುತ್ತಾ, ಈ ಸಮಾಜದಲ್ಲಿನ ಒಳಿತು ಕೆಡುಕುಗಳನ್ನು ಅರ್ಥಮಾಡಿಕೊಂಡು ಒಳಿತನ್ನು ಜೀವನದಲ್ಲಿ ಅಳವಡಿಸಿಕೊಂಡು ಧೈರ್ಯವಾಗಿ ಎಷ್ಟೇ ಕಷ್ಟ ಬಂದರೂ ಎದೆಗುಂದದೆ ಮುಂದುವರಿಯಲು ಶಕ್ತಿಯನ್ನು ನೀಡುವುದೇ ವಿವೇಕ. ಸ್ವಾಮಿ ವಿವೇಕಾನಂದರಿಗೆ ಆ ಒಂದು ಶಕ್ತಿ ಇದ್ದದರಿಂದಲೇ ನರೇಂದ್ರನಾಥ ದತ್ತರಾಗಿದ್ದವರು ಸ್ವಾಮಿ ವಿವೇಕಾನಂದರಾದರು ಎಂದು ಹೇಳಿದರು.
ಯುವ ಜನತೆ ಭಾರತದ ಭವಿಷ್ಯ. ಮುಂದೆ ನೀವು ಈ ದೇಶವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವವರು ಎಂದು ಹೇಳಿದರು. ಭಾರತವು ಇಡಿ ಜಗತ್ತನ್ನೇ ಗೆಲ್ಲುತ್ತೆ ಅದು ಖಡ್ಗದಿಂದ ಅಲ್ಲ. ಯಾವುದೇ ಮಿಲಿಟರಿ ಶಕ್ತಿಯಿಂದ ಅಲ್ಲ ಬದಲಾಗಿ ನಮ್ಮ ಆದ್ಯಾತ್ಮದಿಂದ ಎಂದು ವಿವೇಕಾನಂದರು ಹೇಳಿದ್ದರು. ಇದು ನಮ್ಮ ಆಧ್ಯಾತ್ಮಕ್ಕೆ ಇರುವ ಶಕ್ತಿಯಾಗಿದೆ. ಇಲ್ಲಿ ಶ್ರೇಷ್ಠ- ಕನಿಷ್ಠ ಮತ್ತು ಧರ್ಮ ಧರ್ಮ ಎಂದು ಹೊಡೆದಾಡುವುದಲ್ಲ ನಾವೆಲ್ಲರೂ ಕೂಡಿ ಬಾಳಬೇಕು ಎಂದು ತಿಳಿಸಿದರು.
ನಿಮ್ಮ ಮನಸ್ಸನ್ನು ಏಕಾಗ್ರತೆಯಿಂದ ನಿಯಂತ್ರಿಸಿ, ಶಾರೀರಕವಾಗಿ ದೃಢವಾಗಿದ್ದುಕೊಂಡು ಆತ್ಮವಿಶ್ವಾಸದಿಂದ ಮುಂದೆ ಬರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಸಾಧನೆ ಮಾಡಿ ನಿಮ್ಮ ಪೋಷಕರು ಗರ್ವದಿಂದ ನಿಮ್ಮ ಕಡೆಗೆ ನೋಡುವಂತೆ ನೀವೆಲ್ಲರೂ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮತ್ತು ಮಾಜಿ ಸೈನಿಕರಾದ ಬೆಳ್ಳಾಲ ಗೋಪಿನಾಥ್ ರಾವ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾರ್ಗಿಲ್ ವಿಜಯ ದಿವಸ್ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತೀಯ ಸೇನೆಯಲ್ಲಿ ಸುಮಾರು 20 ರಿಂದ 35 ವರ್ಷ ಸೇವೆ ಸಲ್ಲಿಸಿ, ನಿವೃತ್ತರಾಗಿ, ಪ್ರಸ್ತುತ ಕಾಲೇಜಿನಲ್ಲಿ ಶಿಸ್ತುಪಾಲನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸುಬೇದಾರ್ ಕೆ. ಗುಣಾಕರ್, ಹವಾಲ್ದಾರ್ ಎನ್. ವಿದ್ಯಾಧರ, ಹವಾಲ್ದಾರ್ ಎನ್. ಬಾಲಕೃಷ್ಣ, ಹವಾಲ್ದಾರ್ ಹರಿಚಂದ್ರ, ಹವಾಲ್ದಾರ್ ಡಿ. ಬಾಲಕೃಷ್ಣ, ಹವಾಲ್ದಾರ್ ಎಂ. ಭಾಸ್ಕರ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲರಾದ ಡಾ. ಎಸ್. ಎನ್. ವೆಂಕಟೇಶ್ ನಾಯಕ್ ವಹಿಸಿದ್ದರು. ಕಾಲೇಜಿನ ಟ್ರಸ್ಟಿಗಳಾದ ಸುಭಾಷ್ ಝಾ, ಡಾ. ಶರತ್ ಗೋರೆ, ಚಂದ್ರಶೇಖರ್ ರಾಜೇ ಅರಸ್, ಎಸ್. ಮೆಹಬೂಬ್ ಬಾಷಾ, ಯೋಗೇಶ್ ಬೆಡೆಕರ್ , ಆಡಳಿತಾಧಿಕಾರಿ ಅರುಣ್ ಡಿಸಿಲ್ವ ವೇದಿಕೆಯಲಿದ್ದರು . ವಿದ್ಯಾರ್ಥಿಗಳಾದ ಕು. ಹೊನ್ವಿತಾ ಅತಿಥಿಗಳನ್ನು ಪರಿಚಯಿಸಿದರು. ಗೌತಮ್ ಸ್ವಾಗತಿಸಿದರು. ಕು. ತಪಸ್ಯ ಭಟ್ ನಿರೂಪಿಸಿದರು. ತೇಜಸ್ ಬಲ್ಲಾಳ್ ವಂದನಾರ್ಪಣೆಗೈದರು.












