23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಡಿ 22: ನವೀಕೃತಗೊಂಡು ಉದ್ಘಾಟನೆಗೆ ಸಿದ್ಧಗೊಂಡಿರುವ ಉಜಿರೆಯ ಸಂತ ಅಂತೋನಿ ಚರ್ಚ್; ಸುಮಾರು ರೂ 1.20 ಕೋಟಿ ವೆಚ್ಚದಲ್ಲಿ ನವೀಕರಣ,ಸಾಂಸ್ಕೃತಿಕ ಕಾರ್ಯಕ್ರಮ, ತುಳು ಹಾಸ್ಯಮಯ ನಾಟಕ ಪ್ರದರ್ಶನ

ಉಜಿರೆ: ಪವಾಡ ಪುರುಷರೆಂದು ಜಗತ್ ಪ್ರಸಿದ್ಧರಾದ ಸಂತ ಅಂತೋನಿಯವರ ಹೆಸರಿಗೆ ಸಮರ್ಪಿಸಲ್ಪಟ್ಟ ಉಜಿರೆ ಧರ್ಮಕೇಂದ್ರವು ದುರಸ್ತಿ ಮತ್ತು ನವೀಕರಣಗೊಂಡು ಡಿ. 22ರಂದು ಆಶೀರ್ವಚನಗೊಳ್ಳಲು ಸಿದ್ಧವಾಗಿದೆ ಎಂದು ಚರ್ಚಿನ ಧರ್ಮ ಗುರುಗಳಾದ ಫಾ.ಅಬೆಲ್ ಲೋಬೋ ಹೇಳಿದರು.

ಅವರು ಡಿ 16ರಂದು ಉಜಿರೆ ಅನುಗ್ರಹ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

1969ರ ತನಕ ಉಜಿರೆ ಕ್ರೈಸ್ತ ವಿಶ್ವಾಸಿಗಳು ಬೆಳ್ತಂಗಡಿಯ ಹೋಲಿ ರಿಡೀಮರ್ ಧರ್ಮಕೇಂದ್ರಕ್ಕೆ ತೆರಳಿ ತಮ್ಮ ಅಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುತ್ತಿದ್ದರು. ಅಂದಿನ ದಿನಗಳಲ್ಲಿ ಬೆಳ್ತಂಗಡಿಯ ಧರ್ಮಗುರುಗಳಾಗಿರುವ ವಂದನೀಯ ಇ.ಪಿ.ಡಾಯಸ್ ಸ್ವಾಮಿಯವರು ಈ ಜನರ ಕಷ್ಟಗಳನ್ನು ಮನಗಂಡು ಉಜಿರೆಯಲ್ಲೇ ಒಂದು ದೇವಾಲಯವನ್ನು ನಿರ್ಮಿಸಲು ಯೋಚಿಸಿದರು ಹಾಗೂ ತಾನು ಯೋಚಿಸಿದ ಕಾರ್ಯವನ್ನು ಮುನ್ನಡೆಸುತ್ತಾ ಬಂದರು. 1969ರಲ್ಲಿ ಉಜಿರೆಯಲ್ಲಿ ಒಂದು ಚಿಕ್ಕ ಚರ್ಚ್ ನಿರ್ಮಿಸುವ ಜೊತೆಗೆ ತಾವೂ ಕೂಡಾ ಉಜಿರೆ ಧರ್ಮಕೇಂದ್ರದ ಪ್ರಥಮ ಧರ್ಮಗುರುವಾಗಿ ನಿಯುಕ್ತಿಗೊಂಡರು. ಸರಿಸುಮಾರು 40 ಕ್ರೈಸ್ತ ಕುಟುಂಬಗಳನ್ನು ಹೊಂದಿದ್ದ ಈ ಧರ್ಮಕೇಂದ್ರವನ್ನು ಪದುವಾದ ಸಂತ ಅಂತೋನಿಯವರ ಹೆಸರಿಗೆ ಸಮರ್ಪಿಸಲಾಯಿತು ಎಂದರು.

ವರ್ಷಗಳು ಕಳೆದಂತೆ, ಭಕ್ತಾದಿಗಳ ಸಂಖ್ಯೆ ಹೆಚ್ಚಾಗತೊಡಗಿತು. ಭಕ್ತಾದಿಗಳ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಕಟ್ಟಡವು ಚಿಕ್ಕದಾಯಿತು. 1995ರಲ್ಲಿ ಧರ್ಮಗುರುಗಳಾದ ವಂದನೀಯ ಆ್ಯಂಡೂ ಡಿಸೋಜರವರ ಮುಂದಾಳತ್ವದಲ್ಲಿ ಹೊಸ ಚರ್ಚ್ ನಿರ್ಮಾಣಗೊಂಡಿತು. ಕಳೆದ ಸುಮಾರು 31 ವರ್ಷಗಳಿಂದ ಈ ಚರ್ಚ್‌ನಲ್ಲಿ ಭಕ್ತಾದಿಗಳು ತಮ್ಮ ಅಧ್ಯಾತ್ಮಿಕ ಜೀವನಕ್ಕೆ ಮುನ್ಸೂಚನೆ ಪಡೆಯುತ್ತಿದ್ದಾರೆ ಎಂದರು.

ಆದರೆ ಕೆಲವು ವರ್ಷಗಳಿಂದ, ಈ ಚರ್ಚಿನ ಶಿಲುಬೆ ಗೋಪುರವು ಕ್ಷೀಣಿಸುತ್ತಾ ಬಂದಿದ್ದು, ದುರಸ್ತಿ ಹಂತಕ್ಕೆ ತಲುಪಿತ್ತು. ಈ ಗೋಪುರವನ್ನು ನವೀಕರಿಸಬೇಕು ಹಾಗೂ ಚರ್ಚನೊಳಗೆ ಸ್ಥಳದ ವಿಸ್ತರಣೆಯನ್ನು ಮಾಡಬೇಕೆಂದು ಭಕ್ತಾದಿಗಳ ಕೋರಿಕೆಯಾಗಿತ್ತು. ಈ ಯೋಜನೆಯನ್ನು ಸಂಪೂರ್ಣಗೊಳಿಸಲು ಬೇಕಾಗುವಷ್ಟು ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಲು ಸ್ಥಳೀಯ ಭಕ್ತಾದಿಗಳಿಂದ ಅಸಾಧ್ಯವಾಗಿರುವುದರಿಂದ, ಸರಕಾರದ ಬಳಿ ಸಹಾಯಕ್ಕಾಗಿ ವಿನಂತಿಸಲಾಯಿತು. ಸರಕಾರವೂ ಸೂಕ್ತ ಸ್ಪಂದನೆ ನೀಡಿತು.ಅಲ್ಪಸಂಖ್ಯಾತ ಇಲಾಖೆಯಿಂದ 50ಲಕ್ಷ ರೂಪಾಯಿ ಮಂಜೂರಾಗಿದ್ದು, 25 ಲಕ್ಷ ರೂಪಾಯಿ ದೊರೆತಿದೆ. ಒಟ್ಟಿನಲ್ಲಿ ಸುಮಾರು 1 ಕೋಟಿ 20 ಲಕ್ಷ ರೂ.ವೆಚ್ಚದಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಸಂಪೂರ್ಣಗೊಳಿಸಿ ಡಿಸೆಂಬರ್ 22ರಂದು ನವೀಕರಣಗೊಂಡ ಧರ್ಮಕೇಂದ್ರದಲ್ಲಿ ಆಶೀರ್ವಚನ ಕಾರ್ಯವು ನಡೆಯಲಿದೆ ಎಂದರು.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ.ಡಾ.ಪೀಟರ್ ಪಾವ್ ಸಲ್ದಾನಾರವರು ಆಶೀರ್ವಚನ ನೀಡಿ ಬಲಿಪೂಜೆಯನ್ನು ಅರ್ಪಿಸಿ, ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಿರುವರು. ಅವರೊಂದಿಗೆ ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರುಗಳಾಗಿರುವ ವಂದನೀಯ ವಾಲ್ಟರ್ ಡಿಮೆಲ್ಲೊ ಸ್ವಾಮಿಯವರು, ವಲಯದ ಇತರ ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗಿಗಳಾಗಲಿದ್ದಾರೆ. ಧರ್ಮಭಗಿನಿಯರೂ, ಭಕ್ತಾದಿಗಳೂ ಭಾಗವಹಿಸಿ ಆ ದಿನವು ಒಂದು ವಿಶೇಷ ಸಂಭ್ರಮದ ದಿನವಾಗಿ ರೂಪುಗೊಳ್ಳಲಿದೆ ಎಂದರು.

ಬಲಿಪೂಜೆಯ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಂಗಳೂರಿನ ಧರ್ಮಾಧ್ಯಕ್ಷರು ಅಧ್ಯಕ್ಷತೆ ವಹಿಸಲಿರುವರು. ಎಮ್.ಎಲ್.ಸಿ.ಐವನ್ ಡಿಸೋಜ ರವರು ಮುಖ್ಯ ಅತಿಥಿಗಳಾಗಿರುವರು. ಶಾಸಕರಾದ ಹರೀಶ್ ಪೂಂಜ, ವಲಯ ಪ್ರಧಾನ ಗುರುಗಳಾಗಿರುವ ವಂ.ವಾಲ್ಟರ್ ಡಿಮೆಲ್ಲೊ, ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಆಡಳಿತ ಮೊಕೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ, ಎಮ್.ಎಲ್.ಸಿ. ಪ್ರತಾಪಸಿಂಹ ನಾಯಕ್,ಬೋಜೇಗೌಡ, ಮೆಸ್ಕಾಂನ ಚೇರ್ಮಾನ್ ಹರೀಶ್ ಕುಮಾರ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಕೆ.ಪಿ.ಸಿ.ಸಿ.ಕಾರ್ಯದರ್ಶಿ ರಕ್ಷಿತ್ ಶಿವರಾಂ. ಅಲ್ಪಸಂಖ್ಯಾತ ಇಲಾಖೆಯ ಜಿಲ್ಲಾಧಿಕಾರಿ ಜಿನೇಂದ್ರ ಎಂ., ಉಜಿರೆ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಜನಾಬ್ ಅಬೂಬಕ್ಕರ್ ಯು.ಹೆಚ್. ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು

ಸಭಾ ಕಾರ್ಯಕ್ರಮದಲ್ಲಿ ದಾನಿಗಳಿಗೆ ಗೌರವಿಸುವ, ಸನ್ಮಾನಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಸಭಾ ಕಾರ್ಯಕ್ರಮದ ಬಳಿಕ ಬಂದಿರುವ ಎಲ್ಲಾ ಭಕ್ತಾದಿಗಳಿಗೆ ಶುಚಿ-ರುಚಿಯಾದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

ಚರ್ಚ್‌ನ ನವೀಕರಣದ ಸಂದರ್ಭದಲ್ಲಿ ಕೆಲವೊಂದು ವಿಶೇಷತೆಗಳನ್ನು ಅಳವಡಿಸಲಾಗಿದೆ. ಶಿಲುಬೆ ಗೋಪುರದಲ್ಲಿ ಮೂರು ಎಲ್.ಇ.ಡಿ. ಶಿಲುಬೆಗಳನ್ನು ರಚಿಸಲಾಗಿದೆ. ಈ ಗೋಪುರದ ಮಧ್ಯಭಾಗದಲ್ಲಿ ಸುಮಾರು ಹತ್ತು ಅಡಿ ಎತ್ತರದ ಸಂತ ಅಂತೋನಿಯವರ ಪ್ರತಿಮೆಯನ್ನು ಇಡಲಾಗಿದೆ. ಚರ್ಚ್‌ನ ಬಲಬದಿಗೆ ವೆಲಂಕಣಿ ಮಾತೆಯ ಗ್ರೂಟ್ರೊ ನಿರ್ಮಿಸಲಾಗಿದ್ದು, ಎಡಬದಿಗೆ ಸಂತ ಅಂತೋನಿಯವರ ಗ್ರೂಟ್ರೊ ನಿರ್ಮಿಸಲಾಗಿದೆ. ಸ್ಥಾಪಕ ಧರ್ಮಗುರುಗಳಾದ ಫಾ.ಇ.ಪಿ.ಡಾಯಸ್‌ರವರ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಚರ್ಚ್ ಒಳಗೆ ಭಕ್ತಾದಿಗಳ ಅನುಕೂಲಕ್ಕಾಗಿ ಇರುವ ಮೊಣಕಾಲಿಡುವ ಬೆಂಚುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಉತ್ಸವ, ಸಂಭ್ರಮದ ಸಂದರ್ಭದಲ್ಲಿ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಚರ್ಚ್ ಒಳಗೆ 5 ಟಿ.ವಿ.ಗಳನ್ನು ಅಳವಡಿಸಲಾಗಿದೆ. ರಸ್ತೆಯ ಬದಿಯಲ್ಲಿ ದ್ವಾರವನ್ನು ನಿರ್ಮಿಸಲಾಗಿದೆ. ಚರ್ಚ್ ವಠಾರದಲ್ಲಿ ಅನುಗ್ರಹ ಸಭಾಭವನಕ್ಕೆ ಮುಖ್ಯರಸ್ತೆಯಿಂದ ನೇರ ಸಂಪರ್ಕವನ್ನು ಕಲ್ಪಿಸಲಾಗಿದೆ. ಅನುಗ್ರಹ ಸಭಾ ಭವನದ ಅಡುಗೆ ಮನೆಯನ್ನು ವಿಸ್ತರಿಸಲಾಗಿದ್ದು, ಅಡುಗೆಗೆ ಬೇಕಾಗುವ ಪಾತ್ರೆ/ಪರಿಕರಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಚರ್ಚ್ ಸುತ್ತ ಇಂಟರ್ ಲಾಕ್ ಅಳವಡಿಸಲಾಗಿದೆ ಎಂದರು.

ಈ ಕಾರ್ಯಕ್ಕೆ ಈ ಹಿಂದೆ ಧರ್ಮಕೇಂದ್ರದಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳು ಆಗಮಿಸಲಿರುವರು, ಚರ್ಚ್ ವ್ಯಾಪ್ತಿಯಿಂದ ನಿಯುಕ್ತಿಗೊಂಡ ಧರ್ಮಗುರುಗಳೂ, ಧರ್ಮಭಗಿನಿಯರೂ ಆಗಮಿಸಿ ಕಾರ್ಯಕ್ರಮದ ಚೆಂದವನ್ನು ಹೆಚ್ಚಿಸಲಿದ್ದಾರೆ. ಸಂತ ಅಂತೋನಿಯವರ ಭಕ್ತರಾಗಿರುವ ಊರ ಪರವೂರ ವಿಶ್ವಾಸಿಗಳು ಆಗಮಿಸಲಿದ್ದು ಚರ್ಚ್ ವಠಾರವು ಜನಜಂಗುಳಿಯಿಂದ ತುಂಬಲಿದೆ. ನವೀಕೃತ ಕಟ್ಟಡದ ಉದ್ಘಾಟನೆ ಹಾಗೂ ಆಶೀರ್ವಚನದ ಪ್ರಯುಕ್ತ ಅದೇ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಚಾ ಪರ್ಕ ಕಲಾವಿದರು ಕುಡ್ಲ ಇವರು ಅಭಿನಯಿಸುವ ‘ಎನ್ನನೇ ಕಥೆ’ಎಂಬ ತುಳು ಹಾಸ್ಯಮಯ ನಾಟಕವು ಕೂಡ ಪ್ರದರ್ಶನಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ವಂ. ವಿಜಯ್ ಲೋಬೊ, ಪಾಲನ ಮಂಡಳಿ ಉಪಾಧ್ಯಕ್ಷ ಅಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಮಾಧ್ಯಮ ಪ್ರತಿನಿಧಿ ವಲೇರಿಯನ್ ಪಿಂಟೋ, ಆರ್ಥಿಕ ಸಮಿತಿ ಸದಸ್ಯರಾದ ಪ್ರವೀಣ್ ವಿಜಯ್ ಡಿಸೋಜ, ಅರುಣ್ ಸಂದೇಶ್ ಡಿಸೋಜ, ಜಾನೆಟ್ ರೋಡ್ರಿಗಸ್ ಉಪಸ್ಥಿತರಿದ್ದರು.

Related posts

ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರವೇಶಾತಿಗೆ ಆನ್‌ಲೈನ್ ಅರ್ಜಿ ಆರಂಭ

Suddi Udaya

ಸಿರಿ ಸಂಸ್ಥೆಯ ಎಂ.ಡಿ. ಕೆ.ಎನ್ ಜನಾರ್ಧನರವರಿಗೆ ‘ಪ್ರತಿಷ್ಠಿತ ಮಹಾತ್ಮಗಾಂಧಿ ಸದ್ಭಾವನಾ ಅಂತಾರಾಷ್ಟ್ರೀಯ ಪ್ರಶಸ್ತಿ’: ಸಿರಿ ಸಿಬ್ಬಂದಿಗಳಿಂದ ಅಭಿನಂದನಾ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಮೇಳದ ತಿರುಗಾಟ ಪ್ರಾರಂಭ

Suddi Udaya

ಮಡಂತ್ಯಾರು ಸಿ ಎ ಬ್ಯಾಂಕ್ ಅಧ್ಯಕ್ಷ ಜೊಯೆಲ್ ಮೆಂಡೊನ್ಸಾ ರವರನ್ನು ಅಭಿನಂದಿಸಿದ ಸಂಸದ ಕ್ಯಾ| ಬ್ರಿಜೇಶ್ ಚೌಟ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕನಾಥ್ ದಂಪತಿ ಭೇಟಿ

Suddi Udaya

ಭಾರಿ ಮಳೆಯಿಂದಾಗಿ ಕಾರ್ಯತ್ತಡ್ಕ ಕುಲಾಡಿ ಸೇತುವೆಯ ಬಳಿ ಧರೆಕುಸಿತ: ಅಡಿಕೆ ಗಿಡಗಳು ನೀರು ಪಾಲು

Suddi Udaya
error: Content is protected !!