ಕೊಕ್ಕಡ: ಕೊಕ್ಕಡ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆಲ ದಿನಗಳ ಹಿಂದೆ ಬೆಳೆ ನಾಶಗೊಳಿಸುತ್ತಿದ್ದ ಕಾಡಾನೆ ವಾಹನಗಳ ಮೇಲೂ ದಾಳಿ ಮಾಡಲು ಆರಂಭಿಸಿದ್ದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಮಾ. 28ರಂದು ಮುಂಡೂರುಪಳಿಕೆ ಎಂಬಲ್ಲಿ ಮನೆ ಸಮೀಪ ನಿಲ್ಲಿಸಿದ್ದ ಮಾರುತಿ ಕಾರಿನ ಮೇಲೆ ದಾಳಿ ನಡೆಸಿದೆ. ಮಾ.29 ರಂದು ಮುಂಡೂರು ಪಳಿಕೆ ಸಂಕುಬೈಲುವಿನಲ್ಲಿ ಕಾಡಾನೆ ದಾಳಿ ದ್ವಿಚಕ್ರ ವಾಹನ ಮೇಲೆ ದಾಳಿ ಮಾಡಿ ಹಾನಿಗೊಳಿಸಿದೆ. ಅಲ್ಲದೇ ಆನೆ ದಾಂದಲೆಯಿಂದ ಭತ್ತ ಕೃಷಿ ಹಾನಿಗೊಳಾಗಾಗಿದೆ. ಘಟನಾ ಸ್ಥಳಕ್ಕೆ ಆರ್ಏಫ್ಓ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾ.25ರಂದು ಮರುವಂತಿಲದಲ್ಲಿ ರಾತ್ರಿ ವೇಳೆ ಕಾಣಿಸಿಕೊಂಡ ಕಾಡಾನೆ, ವಿಜಯ ಶಬರಾಯ ಅವರ ಮನೆಯ ಗೇಟ್ ಮುರಿದು ಕೃಷಿ ಭೂಮಿಗೂ ಹಾನಿ ಉಂಟು ಮಾಡಿತ್ತು. ಆನಂದ ಗೌಡ ಕುಶಲಪ್ಪ ಗೌಡ, ಸುಂದರ ನಾಯ್ಕ ಅವರಿಗೆ ಸೇರಿದ ಕೃಷಿ ಭೂಮಿಗೂ ನುಗ್ಗಿದ ಕಾಡಾನೆ ತೆಂಗಿನ ಮರಗಳಿಗೆ ಹಾನಿ ಮಾಡಿತ್ತು. ಮಾ.೨೩ರಂದು, ಸೌತಡ್ಕ ರಸ್ತೆಯ ವಸರಿಕಟ್ಟೆ ಎಂಬಲ್ಲಿ ಸಂಜೆ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿ ಹಾಗೂ ಬೈಕ್ ಸವಾರನಿಗೆ ಕಾಡಾನೆ ಕಾಣಿಸಿಕೊಂಡು ಭಯಬೀತಗೊಂಡಿದ್ದರು. ಹೀಗಾಗಿ ಕಾಡಾನೆ ಉಪಟಳದಿಂದ ರಕ್ಷಣೆ ಕೊಡುವಂತೆ ಭಾಗದ ಕೃಷಿಕರು ಅರಣ್ಯ ಇಲಾಖೆ ಒತ್ತಾಯಿಸಿದರು.
ಎಸಿಎಫ್ ಭೇಟಿ: ಕಾಡಾನೆ ಉಪಟಳ ಹೆಚ್ಚಾದ ಹಿನ್ನೆಲೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ ಅವರು ಕಾಡಾನೆಯಿಂದ ಹಾನಿಗೆ ಒಳಗಾದ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯರು ಜೊತೆ ಮಾತುಕತೆ ನಡೆಸಿ, ಪರಿಹಾರದ ಬಗ್ಗೆ ಮಾಹಿತಿ ನೀಡಿದರು.
ಎಲಿಫೆಂಟ್ ಟಾಸ್ಕ್ ಪೋರ್ಸ್: ಕಾಡಾನೆ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಮರುವಂತಿಲ ಭಾಗದಲ್ಲಿ ಎಲಿಫೆಂಟ್ ಟಾಸ್ಕ್ ಪೋರ್ಸ್ ತಂಡ ನಿಯೋಜನೆ ಮಾಡಲಾಗಿದೆ. ತಂಡ ಹಗಲು ರಾತ್ರಿ ಕಾಡಾನೆಗಳ ಚಲನವಲನ ಬಗ್ಗೆ ನಿಗಾ ಇಡಲಿದೆ.












