ಬಳಂಜ: ಬಳಂಜ ಗ್ರಾಮದ ಬದಿನಡೆ ಶ್ರೀ ನಾಗ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ಬ್ರಹ್ಮಕಲಶದ ಪೂರ್ವಾಭಾವಿಯಾಗಿ ವಿವಿಧ ಪ್ರಾಯಚ್ಚಿತ ಹೋಮಗಳು, ಆಶ್ಲೇಷಬಲಿ, ನಾಗ ದೇವರಿಗೆ ತಂಬಿಲ, ಬ್ರಹ್ಮಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ ಪರಿವಾರ ದೈವ ದೇವರುಗಳಿಗೆ ವಿಶೇಷ ಪೂಜೆಯು ಕ್ಷೇತ್ರದ ತಂತ್ರಿಗಳಾದ ಬಾಲಕೃಷ್ಣ ಪಾಂಗಣ್ಣಾಯರ ವೈದಿಕ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು.

ಪಂಚಶ್ರೀ ಕುಣಿತ ಭಜನಾ ಮಂಡಳಿ ನಾಲ್ಕೂರು ಸೇರಿದಂತೆ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸೇವೆ ನಡೆಯಿತು. ಇದಕ್ಕಿಂತ ಮುಂಚೆ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ರವರು ಬದಿನಡೆ ಕ್ಷೇತ್ರದಲ್ಲಿ ನಡೆಯುವ ಬ್ರಹ್ಮ ಕಲಶೋತ್ಸವದ ಸಂದರ್ಭದಲ್ಲಿ ಅಗಬೇಕಾಗಿರುವ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈಗಾಗಲೇ ಈ ದೇವಸ್ಥಾನದ ಸಂಪರ್ಕ ರಸ್ತೆಗೆ ಅಟ್ಲಾಜೆಯಿಂದ ಕಾಂಕ್ರೀಟಿಕರಣ ಮಾಡಲು 50 ಲಕ್ಷ ಅನುದಾನ ಬಿಡುಗಡೆ ಆಗಿದ್ದು ಶೀಘ್ರದಲ್ಲೇ ಕೆಲಸ ಆರಂಭಗೊಳ್ಳುತ್ತದೆ ಎಂದು ತಿಳಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಧುಕರ ಸುವರ್ಣ, ಶೇಖರ್ ಶೆಟ್ಟಿ ಕರಂಬಿತ್ತಿಲ್, ಗಣೇಶ ದೇವಾಡಿಗ ಸಂಭ್ರಮ, ಪ್ರಕಾಶ್ ವೇಣೂರು, ಸತೀಶ್ ಬಿ.ಕೆ.,ಭಾಸ್ಕರ್ ಸಾಲಿಯಾನ್ ಶಿರ್ಲಾಲ್,ಸಂತೋಷ್ ಕಾಪಿನಡ್ಕ, ಸದಾನಂದ ಸಾಲಿಯಾನ್ ಬಳಂಜ, ಸುರೇಶ್ ಶೆಟ್ಟಿ ಕುರಲ್ಯ, ಭಾಸ್ಕರ್ ಶೆಟ್ಟಿ ಕಾರ್ಯನ, ಸತೀಶ್ ಪೂಜಾರಿ ಮುಂತಾದ ಗಣ್ಯರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕ್ಷೇತ್ರದ ಧರ್ಮದರ್ಶಿಗಳಾದ ಜಯ ಸಾಲಿಯಾನ್ ಎಲ್ಲರನ್ನೂ ಸ್ವಾಗತಿಸಿದರು.













