ನಡ: ನಡ ಗ್ರಾಮದ ಪರಿಸರದಲ್ಲಿ ಕಳೆದ ಎರಡು ದಿನಗಳಲ್ಲಿ ನಾಲ್ಕು ಕಾಡು ಹಂದಿಗಳು ಸಾವನ್ನಪ್ಪಿರುವುದು ಕಂಡು ಬಂದಿದ್ದು, ಕಾಡು ಹಂದಿಗಳು ಮಿದುಳು ಜ್ವರದಿಂದ ಸಾವನ್ನಪ್ಪಿರಬಹುದೆಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ನಡ ಗ್ರಾಮದ ಪ್ರೌಢ ಶಾಲಾ ಬಳಿ ಕಾಡಿನಲ್ಲಿ ನಿನ್ನೆ ಆ.20ರಂದು ಎರಡು ಕಾಡುಹಂದಿಗಳ ಶವ ಪತ್ತೆಯಾಗಿದೆ. ಎರಡು ಶವಗಳು ಸಂಪೂರ್ಣವಾಗಿ ಕೊಳೆತು ಹೋಗಿತ್ತು. ಸ್ಥಳೀಯರು ಇದನ್ನು ದಫನ ಮಾಡಿದ್ದರು. ಆ.21 ಇಂದು ನಡ ಗ್ರಾಮದ ಕರ್ಮಿಲೆಟ್ ಗೋವಿಯಸ್ ಇವರ ರಬ್ಬರ ತೋಟದಲ್ಲಿ ಎರಡು ಕಾಡಿನ ಹಂದಿಗಳು ಸತ್ತು ಬಿದ್ದಿರುವುದು ಪತ್ತೆಯಾಗಿದೆ ಎಂದು ಸ್ಥಳೀಯ ಗಣ್ಯರಾದ ಶ್ಯಾಮಸುಂದರ್ ನಡ ತಿಳಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಕುದುರೆಮುಖ ರಕ್ಷಿತಾರಣ್ಯದಿಂದ ಕಾಡಾಂದಿಗಳು ಈ ಪ್ರದೇಶಕ್ಕೆ ಬರುತ್ತಿದ್ದು, ಹಂದಿಗಳು ಯಾವುದಾದರೂ ಕಾಯಿಲೆಯಿಂದ ಮೃತಪಟ್ಟಿರಬಹುದೇ ಅಥವಾ ಕಿಡಿಗೇಡಿಗಳು ಇಟ್ಟ ವಿಷದಿಂದ ಈ ರೀತಿ ಆಗಿರಬಹುದೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಕಾಡು ಹಂದಿಗಳ ತಲೆಯ ಭಾಗ ಕೊಳೆತು ಹೋಗಿರುವುದರಿಂದ ಮಿದುಳು ಜ್ವರದಿಂದ ಸಾವನ್ನಪ್ಪಿರಬಹುದೆಂಬ ಶಂಕೆ ಸ್ಥಳೀಯವಾಗಿ ವ್ಯಕ್ತವಾಗುತ್ತಿದೆ.











