ಬೆಳ್ತಂಗಡಿ: ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಸಂಯೋಜಿತವಾಗಿ ಬೆಂಗಳೂರಿನ ಕಲಾ ಕದಂಬ ಆರ್ಟ್ ಸೆಂಟರ್ ಮೂಲಕ 2024-25ನೇ ಸಾಲಿನ ಯಕ್ಷಗಾನ ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ ಪದವಿಯ ಎರಡು ಸೆಮಿಸ್ಟರ್ಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪದವಿ ಪ್ರದಾನ ಸಮಾರಂಭವು ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿಗಳಾದ ಪ್ರೊ. ನಾಗೇಶ ವಿ. ಬೆಟ್ಟಕೋಟೆ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಬಿ.ಎಂ.ಶ್ರೀ ಕಲಾಭವನದಲ್ಲಿ ಜರಗಿತು.
ವಿ.ವಿ ಕುಲಪತಿಗಳಾದ ಡಾ.ಕೆ.ರಾಮಕೃಷ್ಣಯ್ಯ ಅವರು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ದಿವಾಕರ ಆಚಾರ್ಯ ಗೇರುಕಟ್ಟೆ ಇವರಿಗೆ ಪದವಿ ಪ್ರದಾನ ಮಾಡಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾಗಿರುವ ಇವರು ಹವ್ಯಾಸಿ ಕಲಾವಿದ, ಸಂಘಟಕರಾಗಿದ್ದು ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಉಪ್ಪಿನಂಗಡಿ ಇದರ ಅಧ್ಯಕ್ಷ, ಯಕ್ಷ ಭಾರತಿ ಬೆಳ್ತಂಗಡಿ ಇದರ ಕಾರ್ಯದರ್ಶಿಯಾಗಿದ್ದು, ದ.ಕ ಜಿಲ್ಲೆಯಲ್ಲಿ ಯಕ್ಷಗಾನ ಡಿಪ್ಲೋಮಾ ಪದವಿಯನ್ನು ಪಡೆದ ಮೊದಲಿಗರಾಗಿದ್ದಾರೆ.
ಪದವಿ ಪ್ರದಾನ ಸಮಾರಂಭದಲ್ಲಿ ಬಿ.ಎಂ. ಶ್ರೀ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಆರ್. ಲಕ್ಷ್ಮೀನಾರಾಯಣ, ಯಕ್ಷಗಾನ ವಿದ್ವಾಂಸರಾದ ಆನಂದ ರಾಮ ಉಪಾಧ್ಯ, ಫಣಿಗಿರಿ ಪ್ರತಿಷ್ಠಾನದ ಉಮೇಶ ಶಿರೂರು, ಕಲಾಕದಂಬ ಆರ್ಟ್ ಸೆಂಟರ್ ನಿರ್ದೇಶಕ ಡಾ. ರಾಧಾಕೃಷ್ಣ ಉರಾಳ, ಕಾರ್ಯದರ್ಶಿ ಮುರಳೀಧರ ನಾವಡ ಉಪಸ್ಥಿತರಿದ್ದರು.












